ಬೀದರ್ : ‘ತೆಲಂಗಾಣ ಗಡಿಭಾಗದ ಜಹೀರಾಬಾದ್ ಸಮೀಪದ ಮೆಟಲ್ಕುಂಟಾ ರೈಲು ನಿಲ್ದಾಣ ಸಮೀಪ ರೈಲ್ವೆ ಅಂಡರ್ಬ್ರಿಡ್ಜ್ ನಿರ್ಮಾಣಕ್ಕೆ ₹7.65 ಕೋಟಿ ಮಂಜೂರಾಗಿದೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ಇದರೊಂದಿಗೆ ಮೂರು ದಶಕಗಳ ಬೇಡಿಕೆ ಈಡೇರಿದಂತಾಗಿದೆ.
ಈ ಅಂಡರ್ಬ್ರಿಡ್ಜ್ ನಿರ್ಮಾಣದಿಂದ ಬೀದರ್ ದಕ್ಷಿಣ ಕ್ಷೇತ್ರದ ಮನ್ನಳ್ಳಿ, ಬರೂರ, ಭಂಗೂರ, ಸಿಂದೋಲ್, ರಾಜಗೀರ, ಹೊಕ್ರಾಣ (ಕೆ), ಹೊಕ್ರಾಣ (ಬಿ), ಧರ್ಮಾಪೂರ, ಚಿಂತಲಗೇರಾ, ನಾಗೋರಾ, ಯಾಕತಪೂರ, ಸಾತೋಳಿ ಮುಂತಾದ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಹೀರಾಬಾದ್ ಹಾಗೂ ಮೆಟಲ್ಕುಂಟಾ ರೈಲು ನಿಲ್ದಾಣಕ್ಕೆ ಹೋಗಬೇಕಾದರೆ ಜನ ರೈಲ್ವೆ ಹಳಿ ದಾಟಿಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಲಾರಿ, ಟ್ರ್ಯಾಕ್ಟರ್, ಚಕ್ಕಡಿ ಸಂಚರಿಸಲು ತೊಂದರೆ ಉಂಟಾಗುತ್ತಿತ್ತು. 15 ಕಿ.ಮೀ ಸುತ್ತಿ ಬಳಸಿ ಹೋಗಬೇಕಿತ್ತು. ಈಗ ಅದು ತಪ್ಪಿದಂತಾಗುತ್ತದೆ ಎಂದಿದ್ದಾರೆ.