ಬೀದರ್: ಬೀದರ್ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು, ಸೋಮವಾರ ನಗರದಲ್ಲಿ (ಆ.28) ನಡೆಯಲಿರುವ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಪೂರ್ವನಿಯೋಜಿತ ಕಾರ್ಯಕ್ರಮಗಳಿಂದ ಇದರಲ್ಲಿ ಭಾಗವಹಿಸಲು ಆಗುವುದಿಲ್ಲ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವು ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಅವುಗಳಿಗೆ ಉತ್ತರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರಿಗೆ ಆಗ್ರಹಿಸಿದ್ದಾರೆ.
ಬೀದರ್ ರಿಂಗ್ರೋಡ್ ಕಾಮಗಾರಿ 2 ಕಿ.ಮೀ ರಸ್ತೆಗೆ ₹10 ಕೋಟಿ ಅನುದಾನದ ಅಗತ್ಯವಿದೆ. ಅದನ್ನು ಯಾವಾಗ ಒದಗಿಸುತ್ತೀರಿ? ನಿಮ್ಮ ಪರಿವಾರದ ಅಮರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಸಾಲದ ಸಂಕಷ್ಟಕ್ಕೆ ಒಳಗಾಗಿದೆ. ಅಮರ ಖಂಡ್ರೆ ಹಾಗೂ ತಪ್ಪಿತಸ್ಥರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಮೇಹಕರ್ ಏತ ನೀರಾವರಿ ಮತ್ತು ಔರಾದ್ ತಾಲ್ಲೂಕಿನ 36 ಕೆರೆಗಳನ್ನು ತುಂಬಿಸುವ ಯೋಜನೆಗೆ ಬಿಜೆಪಿ ಸರ್ಕಾರದಲ್ಲಿ ಟೆಂಡರ್ ಕರೆಯಲಾಗಿತ್ತು. ಇದರ ಪ್ರಕ್ರಿಯೆ ಪೂರ್ಣಗೊಳಿಸಿ ಯಾವಾಗ ಕೆಲಸ ಆರಂಭಿಸುತ್ತೀರಿ? ಜಿಲ್ಲಾ ಸಂಕೀರ್ಣ ಕಾಮಗಾರಿ ಮಹೂರ್ತ ಯಾವಾಗ? ಕೇಂದ್ರ ಸರ್ಕಾರದಿಂದ ಮಂಜೂರಾದ ಸಿಪೇಟ್ ಕಾಲೇಜು ಕಟ್ಟಡ ಕಾಮಗಾರಿಗೆ ರಾಜ್ಯ ಸರ್ಕಾರದ ಅನುದಾನ ಬಿಡುಗಡೆ ಯಾವಾಗ ಮಾಡುತ್ತೀರಿ? ಬೀದರ್-ನಾಂದೇಡ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದ ಅನುದಾನ ಮತ್ತು ಭೂಮಿ ಯಾವಾಗ ಕೊಡುತ್ತೀರಿ ಎಂದು ಕೇಳಿದ್ದಾರೆ.
ಬಸವಕಲ್ಯಾಣದ ಅನುಭವ ಮಂಟಪದ ಹತ್ತಿರ ಯಾತ್ರಿ ನಿವಾಸದ ಮಂಜೂರಾತಿ ಹಾಗೂ ಅನುದಾನ ಬಿಡುಗಡೆ ಯಾವಾಗ? ಔರಾದ್ನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರದಿಂದ ಭೂಮಿ ಯಾವಾಗ ಒದಗಿಸಿಕೊಡುತ್ತೀರಿ? ಬೀದರ್ ಬ್ರಿಮ್ಸ್ ಕಟ್ಟಡ ನಿರ್ಮಾಣದಲ್ಲಿ ನಡೆದ ಅವ್ಯವಹಾರ ಹಾಗೂ ರೆಕಾರ್ಡ್ ರೂಂ ಸುಟ್ಟು ಹಾಕಲಾಗಿತ್ತು. ಅದರ ಬಗ್ಗೆ ತನಿಖೆ ಯಾವಾಗ ನಡೆಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಫಸಲ್ ಬಿಮಾ ಯೋಜನೆಯನ್ನು ಗೋಲ್ಮಾಲ್ ಯೋಜನೆ ಎಂದು ಆರೋಪಿಸಿದ್ದೀರಿ. ಈ ಬಾರಿ ಜಿಲ್ಲೆಯಲ್ಲಿ ಸೂಕ್ತ ಮಳೆಯಾಗಿಲ್ಲ. ಜಿಲ್ಲೆಯ ರೈತರಿಗೆ ₹1 ಸಾವಿರ ಕೋಟಿ ಪರಿಹಾರ ಯಾವಾಗ ಕೊಡಿಸುತ್ತೀರಿ? ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರದಿಂದ ರೈತರಿಗೆ ನೀಡುತ್ತಿದ್ದ ₹4 ಸಾವಿರ ಪ್ರೋತ್ಸಾಹ ಧನ ನಿಲ್ಲಿಸಿದ್ದಿರಿ, ಇದು ರೈತ ವಿರೋಧಿ ನೀತಿಯಲ್ಲವೇ? ಅದನ್ನು ಪುನರ್ ಆರಂಭಿಸುತ್ತೀರಾ? ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿತ್ತು.
ಅದು ಕಾರ್ಯರೂಪಕ್ಕೆ ಬರುವುದು ಯಾವಾಗ? ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಪತ್ರ ಬರೆದು ನನ್ನ ಗಮನಕ್ಕೆ ತಂದು ನೇಮಕ ಮಾಡಬೇಕೆಂದು ಹೇಳಿರುವುದು ಎಷ್ಟು ಸೂಕ್ತ? ಗೋವಾ ಮಾದರಿಯಲ್ಲಿ ಕಸಿನೋ ಆರಂಭಿಸುವ ವಿಚಾರದ ಕುರಿತು ನಿಮ್ಮ ನಿಲುವೇನು? ಎಂದು ಕೇಳಿದ್ದಾರೆ.