ಹುಮನಾಬಾದ್: ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕಾರ್ಖಾನೆಗಳನ್ನು ಮುಚ್ಚಿಸುವಂತೆ ಆಗ್ರಹಿಸಿ ಹುಮನಾಬಾದ್ನ ಸಾರ್ವಜನಿಕ ಹಿತರಕ್ಷಣಾ ಒಕ್ಕೂಟ ಹೋರಾಟ ಸಮಿತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ನಾಗರಿಕರು ಪಾಲ್ಗೊಂಡಿದ್ದರು.
ಪಟ್ಟಣದ ಹಳೇ ಆರ್ಟಿಒ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಬೀದರ್-ಕಲಬುರಗಿ ರಸ್ತೆಯ ಮೇಲಿಂದ ಶಕ್ತಿ ದಾಲ್ ಮಿಲ್ವರೆಗೆ ಸಾಗಿತು. ಈ ವೇಳೆ ಕಲಬುರಗಿ-ಬೀದರ್ ರಸ್ತೆಯಲ್ಲಿ 10 ನಿಮಿಷ ವಾಹನಗಳ ಸಂಚಾರ ಬಂದ್ ಆಗಿತ್ತು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು ರಾಸಾಯನಿಕ ಕಾರ್ಖಾನೆಗಳು ಹಾಗೂ ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ವಿರುದ್ಧ ಹರಿಹಾಯ್ದರು.
ಶೀಘ್ರವೇ ದಾಖಲೆಗಳ ಬಹಿರಂಗ:
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ, ‘ಕೈಗಾರಿಕಾ ಪ್ರದೇಶದಲ್ಲಿ ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ನೇತೃತ್ವದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಿಯ ಕೆಲವು ಕಾರ್ಖಾನೆಯವರಿಗೆ ಬೆದರಿಕೆ ಹಾಕಿ ಅವರಿಂದ ಕಲ್ಲಿದ್ದಲು ಪಡೆದು ಅಧಿಕ ಹಣಕ್ಕೆ ಮಾರುತ್ತಿದ್ದಾರೆ. ಇಲ್ಲಿ ಪ್ರತಿಯೊಂದಕ್ಕೂ ಒಂದೊಂದು ಮೊತ್ತ ನಿಗದಿ ಮಾಡಿದ್ದಾರೆ. ಶಾಸಕರ ಹಿಂದಿರುವ ಕೆಲವರಿಗೆ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳಿಂದ ವೇತನ ನೀಡಲಾಗುತ್ತಿದೆ. ಈ ಎಲ್ಲವನ್ನೂ ಆಧಾರಗಳ ಸಹಿತ ಕೆಲವೇ ದಿನಗಳಲ್ಲಿ ಮಾಧ್ಯಮಗಳಿಗೆ ಬಹಿರಂಗ ಪಡಿಸುವೆ’ ಎಂದು ಗುಡುಗಿದರು.
ಪ್ರತಿಭಟನೆಯ ಬಳಿಕ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅಂಜುಂ ತಬಸುಮ್ ಅವರಿಗೆ ಸಲ್ಲಿಸಲಾಯಿತು.
ಬೇಡಿಕೆಗಳ ಪಟ್ಟಿ:
‘ಶಾಸಕರು ಚುನಾವಣೆ ವೇಳೆ ನೀಡಿದ ಆಶ್ವಾಸನೆಯಂತೆ ರಾಸಾಯನಿಕ ಕಾರ್ಖಾನೆಗಳನ್ನು ಮುಚ್ಚಿಸಬೇಕು. ಕೈಗಾರಿಕಾ ಪ್ರದೇಶಕ್ಕೆ ಅಕ್ರಮ ನೀರು ಸರಬರಾಜು ಮಾಡುತ್ತಿರುವುದು ಬಂದ್ ಆಗಬೇಕು. ಅಮಾಯಕ ಮತ್ತು ಮುಗ್ಧ ಜನರಿಗೆ ಜೀವ ಬೆದರಿಕೆ ಹಾಕುತ್ತಿರುವ ಶಾಸಕರ ಸಹೋದರರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯಪಾಲ, ಮುಖ್ಯಮಂತ್ರಿ, ವಿಧಾನಸಭಾ ಸಭಾಪತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಬರೆದ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ, ಲಕ್ಷ್ಮಣರಾವ್ ಬುಳ್ಳಾ, ಜಿ.ಪಂ. ಮಾಜಿ ಅಧ್ಯಕ್ಷೆ ಭಾರತಬಾಯಿ, ಶ್ರೀಮಂತ ಪಾಟೀಲ ತಾಳಮಡಗಿ, ರಮೇಶ ಡಾಕುಳಗಿ, ದತ್ತಕುಮಾರ ಚಿದ್ರಿ, ಓಂಕಾರ ತುಂಬಾ ಗಡವಂತಿ, ಉಮೇಶ್ ಜಮಗಿ, ಶಿವರಾಜ ಗಂಗಶಟ್ಟಿ, ಸೈಯದ್ ಯಾಸಿನ್ಅಲಿ, ಸಚಿನ್ ಕಲ್ಲೂರ್ ಇದ್ದರು.
ಶಾಸಕರ ಸಹೋದರರು ಸಾರಾಯಿ ಮಾರುತ್ತಿದ್ದರು’
ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ಮಾತನಾಡಿ ‘ನನ್ನ ಹತ್ತಿರ ಮದ್ಯದ ಅಂಗಡಿಗಳು ಇವೆ ಎಂದು ಶಾಸಕರು ಹೇಳುತ್ತಿದ್ದಾರೆ. ಹೌದು ನನ್ನ ಹತ್ತಿರ ನಾಲ್ಕು ಮದ್ಯದ ಅಂಗಡಿಗಳಿವೆ. ಇದು ನನ್ನ ವ್ಯವಹಾರ. ನಿಮ್ಮ ಹತ್ತಿರವೂ ಎರಡು ಮದ್ಯದ ಅಂಗಡಿಗಳು ಇವೆ ಅಲ್ಲವೇ?’ ಎಂದು ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ಅವರನ್ನು ಪ್ರಶ್ನಿಸಿದರು. ‘ನನ್ನ ಮದ್ಯದ ಅಂಗಡಿಗಳಿಂದ ಜನರಿಗೆ ಸಮಸ್ಯೆ ಇದ್ದರೆ ಕೂಡಲೇ ಬಂದ್ ಮಾಡಿಸಿ. ಶಾಸಕರೇ ನಿಮ್ಮ ಹತ್ತಿರ ದಮ್ ಇದ್ದರೆ ನಿಮ್ಮ ಅಂಗಡಿಯೂ ಬಂದ್ ಮಾಡಿಸಿಕೊಳ್ಳಿ. ಕಳೆದ 15 ವರ್ಷಗಳ ಹಿಂದೆ ಶಾಸಕರು ಮತ್ತು ಅವರ ಸಹೋದರರು ತಾಲ್ಲೂಕಿನ ಗ್ರಾಮಗಳಿಗೆ ಸಾರಾಯಿ ಮಾರಾಟ ಮಾಡುತ್ತಿದ್ದರು ಎಂಬುದು ನೆನಪಿರಲಿ’ ಎಂದು ವಾಗ್ದಾಳಿ ನಡೆಸಿದರು. ‘ಸಾರಾಯಿ ಮಾರಾಟ ಮಾಡಿಲ್ಲ ಎಂದು ಇವರು ವೀರಭದ್ರೇಶ್ವರ ದೇವಾಲಯದಲ್ಲಿ ಪ್ರಮಾಣ ಮಾಡಲಿ. ನನ್ನ ಈ ಮಾತು ಸುಳ್ಳಾದರೆ ನನ್ನ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇದು ಸತ್ಯ ಇದ್ದರೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಸವಾಲು ಹಾಕಿದರು.