ಔರಾದ: ತಾಲೂಕಿನ ಜನತೆಗೆ ಕಳೆದ 15 ವರ್ಷಗಳಿಂದ ಪ್ರಭು ಚೌಹಾಣ್ ಅವರು ಮೋಸ ಮಾಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ತಾಲೂಕಿನ ಜನತೆ ಸೋಲಿಸಿ ಪ್ರಭು ಚೌಹಾಣ್ ಮುಕ್ತ ಔರಾದ ಮಾಡಬೇಕು ಎಂದು ಜೆಡಿಎಸ್ ಅಭ್ಯರ್ಥಿ ಜೈಸಿಂಗ್ ರಾಠೋಡ್ ಹೇಳಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಯುವ ಸಮುದಾಯದವರಿಗೆ ಯಾವುದೇ ಕೆಲಸವಿಲ್ಲದೆ ಹೈರಾಣಗಿದ್ದಾರೆ. ಯಾವುದೇ ಒಂದು ಕಂಪನಿ ತರಲು ಇವರ ಕೈಲಾಗಲಿಲ್ಲ. ಬೇಸಿಗೆ ಬಂದರೆ ಸಾಕು ತಾಲೂಕಿನ ಜನ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಜನ ರಸ್ಕಾರ ಮಾಡಿದ್ದಾರೆ. ತಾಲೂಕಿನಲ್ಲಿ ಭೀಮ್ ಸೇನರಾಮ್ ಸಿಂಧೆ ಕೊಡುಗೆ ಏನಿದೆ ಎಂದು ಪ್ರಶ್ನೆ ಮಾಡಿದರು. ನಾನು ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಿದ್ದೇನೆ, ನೀರಿನ ಸಮಸ್ಯೆ ಇದ್ದ ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಿಸಿದ್ದೇವೆ, ರೈತ ಪರ ಹೋರಾಟಗಳನ್ನು ಮಾಡಿದ್ದೇನೆ ಆದ್ದರಿಂದ ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಚುನಾವಣೆಯಲ್ಲಿ ಸುಮಾರು 20ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೇ ಮೊದಲ ವಾರದಲ್ಲಿ ಎಚ್.ಡಿ.ಕುಮಾರ ಸ್ವಾಮಿ ಹಾಗೂ ಜೆಡಿಎಸ್ ನಾಯಕರುಗಳನ್ನು ಕರೆಸಿ ಸುಮಾರು 50000 ಜನರನ್ನು ಸೇರಿಸಿ ಬೃಹತ್ ಮಟ್ಟದ ಬಹಿರಂಗ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ತಾನಾಜಿ ತೋರಣೇಕರ್, ಬಾಲಾ ಸಾಹೇಬ್ ರಾಠೋಡ್, ಕಿಶನ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.