ಚಿಟಗುಪ್ಪ: ‘ಎಲ್ಲ ಸಮುದಾಯದ ಭಕ್ತರ ಒತ್ತಡಕ್ಕೆ ಮಣಿದು ಬೀದರ್ ಲೋಕಸಭಾ ಸ್ಥಾನಕ್ಕೆ ಬಿಜೆಪಿಯಿಂದ ಸ್ಫರ್ಧಿಸಲು ಸಿದ್ಧ’ ಎಂದು ತಡೋಳದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಆದರ್ಶ ಮೈತ್ರಿ ಕೇಂದ್ರದಿಂದ ಮಂಗಳವಾರ ಮಾಘ ನವರಾತ್ರಿ ಪೂಜೆ ನಿಮಿತ್ತ ನಡೆದ ಪೂಜೆ ಧಾರ್ಮಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳಿಂದ ಸಿದ್ಧತೆ ನಡೆಯುತ್ತಿದ್ದು, ಕೆಲವು ಬುದ್ದಿಜೀವಿಗಳು, ಸಮಾಜದ ಹಿತ ಚಿಂತಕರು ಲೋಕಸಭಾ ಚುನಾವಣಾ ಕಣಕ್ಕೆ ತಾವು ಬರಬೇಕು ಎಂಬ ಆಶಯ ವ್ಯಕ್ತಪಡಿಸುತ್ತಿದ್ದು, ಅವರೆಲ್ಲರ ನಿರೀಕ್ಷೆಯಂತೆ ಸಮಯ ಬಂದಾಗ ಜನಸೇವೆಗೆ ಸಿದ್ಧ’ ಎಂದರು.
‘ಪೂಜೆಯು ಮನುಷ್ಯನ ಮನಸ್ಸು, ಭಾವನೆ ಶುದ್ಧಗೊಳಿಸಿ ಜೀವನಕ್ಕೆ ಶಾಂತಿ ನೀಡುತ್ತದೆ ಅನಾದಿಕಾಲದಿಂದ ಪೂಜಾ, ವೃತ ಅನುಷ್ಠಾನಗಳು ದೇಶದ ಸನಾತನ ಸಂಸ್ಕೃತಿಗಳಾಗಿವೆ ಎಂದರು, ಮನೆಗಳಲ್ಲಿ ಧರ್ಮದ ಆಚರಣೆಗಳು ಅವರ ಪರಂಪರೆಯಂತೆ ನಡೆಯುತ್ತಿದ್ದವು. ಆಧುನಿಕ ಜಗತ್ತಿನಲ್ಲಿ ಮನುಷ್ಯ ದೇವರು, ಗುರು ಹಿರಿಯರು, ತಂದೆ ತಾಯಿಯರನ್ನು ಮರೆಯುತ್ತಿರುವುದರಿಂದ ಎಲ್ಲೆಡೆ ಅಶಾಂತಿ ಉಂಟಾಗಿದೆ. ಪ್ರಮಾಣಿಕತೆ, ನ್ಯಾಯ, ಸೌಹಾರ್ದ ಕಡಿಮೆಯಾಗುತ್ತಿವೆ’ ಎಂದು ವಿಷಾದಿಸಿದರು.
ಮೈತ್ರಿಕೇಂದ್ರದ ಪದಾಧಿಕಾರಿ ನಂದಿಕೋಲ ಗೌರೀಶ್ ಮಾತನಾಡಿ, ‘ಕೃಷಿ, ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ದಕ್ಷತೆಯಿಂದ ಎಲ್ಲ ಸಮುದಾಯದವರ ಬಾಳು ಹಸನಾಗಿಸುವ ಕಾರ್ಯ ತಡೋಳ ಸ್ವಾಮೀಜಿ ಅವರಿಂದ ನಡೆದಿದ್ದು, ತಡೋಳಾ ಗ್ರಾಮಕ್ಕೆ 2011ರಲ್ಲಿ ಕೇಂದ್ರ ಕೃಷಿ ಸಚಿವ ಶರದ್ ಪವಾರ ಅವರನ್ನು ಅಹ್ವಾನಿಸಿ ರೈತ ಸಮಾವೇಶ ನಡೆಸಿ ಕೆಲವು ಕೃಷಿ ಕಾಯ್ದೆಗಳಿಗೆ ರೈತರಿಗೆ ಅನುಕೂಲವಾಗುವಂತೆ ಮಾರ್ಪಡಿಸಿ ಆದೇಶ ಹೊರಡಿಸಲು ಕಾರಣರಾಗಿದ್ದಾರೆ. ಸ್ವಾಮೀಜಿ ಸಾಮಾಜಿಕ ಕಳಕಳಿ ಹೊಂದಿದ್ದು ರಾಷ್ಟ್ರ ಸೇವೆಗೆ ಬರಬೇಕೆಂದು ಸಮುದಾಯ ಹಾಗೂ ತರುಣರು ಆಗ್ರಹಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಗೆ ಜಿಲ್ಲೆಯಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಬೇಕು’ ಎಂದರು.
ಕರಬಸಯ್ಯ ಸ್ವಾಮಿ, ಬಾಬು ಸ್ವಾಮಿ, ಬಸವರಾಜ್, ಶಿವಕುಮಾರ್, ಚಂದ್ರಶೇಖರ್ ಶಿವಾಚಾರ್ಯಸ್ವಾಮೀಜಿ ಇತರರು ಹಾಜರಿದ್ದರು.