ಬೀದರ್: ಭಾರತೀಯ ವೈದ್ಯಕೀಯ ಸಂಘದಿಂದ ಹಮ್ಮಿಕೊಂಡಿರುವ ಮೂರು ದಿನಗಳ 89ನೇ ವಾರ್ಷಿಕ ‘ಮೆಡಿಕಾನ್’ ಸಮ್ಮೇಳನಕ್ಕೆ ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬ್ರಿಮ್ಸ್) ಶುಕ್ರವಾರ (ಅ.27) ಚಾಲನೆ ದೊರೆಯಲಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಡಾ. ಚಂದ್ರಕಾಂತ ಗುದಗೆ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಆರ್.ವಿ. ಅಶೋಕನ್ ಅತಿಥಿಗಳಾಗಿ ಭಾಗವಹಿಸುವರು. ಐಎಂಎ ಕರ್ನಾಟಕ ಶಾಖೆ ಅಧ್ಯಕ್ಷರಾದ ಡಾ. ಶಿವಕುಮಾರ ಲಕ್ಕೋಳ್, ಡಾ. ಎಸ್. ಶ್ರೀನಿವಾಸ್ ಸ್ಮರಣಿಕೆ ಬಿಡುಗಡೆಗೊಳಿಸುವರು ಎಂದು ಗುರುವಾರ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮೂರು ದಿನಗಳ ಸಮ್ಮೇಳನದಲ್ಲಿ ಖ್ಯಾತ ಹೃದಯ ತಜ್ಞ ಡಾ. ಮಂಜುನಾಥ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಕುಲಪತಿ ಸೇರಿದಂತೆ 30ಕ್ಕೂ ಹೆಚ್ಚು ತಜ್ಞರು ಪ್ರಬಂಧ ಮಂಡಿಸುವರು. ರಾಜ್ಯದ ವಿವಿಧ ಭಾಗಗಳ ಒಂದು ಸಾವಿರಕ್ಕೂ ಹೆಚ್ಚು ವೈದ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. 60ರಿಂದ 70 ವೈದ್ಯರು ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸುವರು. ವೈದ್ಯಕೀಯ ಪಿ.ಜಿ. ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗವಹಿಸುತ್ತಿದ್ದು, ಇವರು ಕೂಡ ವಿಷಯ ಮಂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಯುವಕರು, ಮಧ್ಯ ವಯಸ್ಕರಲ್ಲಿ ಹೃದಯ ಸ್ತಂಭನ ಜಾಸ್ತಿ ಆಗುತ್ತಿದ್ದು, ಅದಕ್ಕೆ ಮನೆಯಲ್ಲೇ ಅವರಿಗೆ ಹೇಗೆ ಉಪಾಚಾರ ಮಾಡಬಹುದು ಎಂಬ ಪ್ರಾಥಮಿಕ ತಿಳಿವಳಿಕೆ ಕೊಡಲಾಗುತ್ತದೆ. ಹೀಗೆ ಮಾಡುವುದರಿಂದ ಶೇ 40ರಿಂದ 50ರಷ್ಟು ಜೀವಗಳನ್ನು ಉಳಿಸಬಹುದು. ಇದರ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಲೈವ್ ಕೊಡಲಾಗುವುದು. ಹೆಚ್ಚಿನ ಜನರಿಗೆ ಅದರ ಬಗ್ಗೆ ತಿಳಿಸುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಗೊಂದಲದಲ್ಲಿದ್ದಾರೆ. ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಮಕ್ಕಳ ಮಾನಸಿಕ ಸ್ಥಿತಿ ಅರಿತುಕೊಂಡು ಅವರನ್ನು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ‘ಪ್ಯಾರೆಂಟಿಂಗ್’ ಮಾಹಿತಿ ಸಹ ಕೊಡಲಾಗುವುದು ಎಂದು ಹೇಳಿದ್ದಾರೆ.