ಹುಮನಾಬಾದ್: ರಾಜ್ಯ ಸರ್ಕಾರ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣವನ್ನು ಜಾರಿಗೆ ತಂದ ದಿನದಿಂದ ಖಾಸಗಿ ವಾಹನಗಳ ಮಾಲೀಕರು ಜನರಿಲ್ಲದೇ ಪರದಾಡುವ ಸ್ಥಿತಿ ಬಂದಿದೆ.
ಹುಮನಾಬಾದ್ ಹಾಗೂ ಚಿಟಗಪ್ಪ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್ಗಳ ಸಂಚಾರದ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಸಾಮಾನ್ಯವಾಗಿದೆ.
ಇದರ ಜತೆಗೆ ಖಾಸಗಿ ಟಂಟಂ, ಕ್ರೂಷರ್ ಆಟೊಗಳು ಜನರಿಲ್ಲದೇ ಭಣಗುಡುತ್ತಿವೆ. ಹುಮನಾಬಾದ್ ತಾಲ್ಲೂಕಿನ ಮುಗನೂರ್, ಕಬೀರಾಬಾದ್ ವಾಡಿ, ವರವಟ್ಟಿ ಕೆ., ಕಲ್ಲೂರ್, ಕಠೋಳ್ಳಿ, ಬೋರಂಪಳ್ಳಿ, ಚಿತ್ತಕೋಟಾ, ಸಿಂಧನಕೇರಾ, ಗಡವಂತಿ, ಜಾಮನಗರ, ಓತಗಿ, ಸುಲ್ತಾನ್ ಬಾದ್ ವಾಡಿ, ಕಂಟ್ಟು ನಾಯಕ್ ತಾಂಡ, ರೇಡು ತಾಂಡ, ನಿಂಬೂರ್, ಅಲ್ಲೂರ್, ವಡ್ಡನಕೇರಾ, ನಾಮ್ದದಾಪುರ್, ಅಮೀರಾಬಾದ್ ವಾಡಿ, ಸೀತಾಳಗೇರಾ ಹಾಗೂ ಚಿಟ್ಟಗುಪ್ಪ ತಾಲ್ಲೂಕಿನ, ನಿರ್ಣಾ ವಾಡಿ, ಬಸೀರಾಪುರ್, ವಿಠಲಪುರ್, ಕರಕನ್ನಳ್ಳಿ, ಚಾಂಗಲೇರಾ, ಬೇಮಳಖೇಡಾ ಸೇರಿದಂತೆ ವಿವಿಧ ಗ್ರಾಮೀಣ ಭಾಗಗಳಿಗೆ ತೆರಳುವ ಮಹಿಳೆಯರು ಬಸ್ಸಿಗಾಗಿ ಕಾಯುತ್ತಾ ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ.
ಸರ್ಕಾರದ ಶಕ್ತಿ ಯೋಜನೆಯಿಂದ ಉಚಿತವಾಗಿ ಸಂಚರಿಸಲು ಸಾಕಷ್ಟು ಮಹಿಳೆಯರು ಸಂತೋಷದಿಂದಲೇ ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಬಸ್ಗಳ ಕೊರತೆಯಿಂದಾಗಿ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ತಾಲ್ಲೂಕಿನ ಎಲ್ಲ ಹೋಬಳಿ ಹಾಗೂ ಗ್ರಾಮಗಳ ನೂರಾರು ವಿದ್ಯಾರ್ಥಿನಿಯರು ಶಾಲಾ, ಕಾಲೇಜುಗಳಿಗೆ ಸಂಚಾರ ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳೆಯರ ಸಂಚಾರವೂ ದುಪ್ಪಟ್ಟಾಗಿದೆ. ಆದರೆ, ಬಸ್ಗಳ ಕೊರತೆಯಿಂದ ಸಂಚಾರ ಮಾಡುವುದು ಕಷ್ಟವಾಗುತ್ತಿದೆ ಎಂದು ಅಲ್ಲೂರ್ ಗ್ರಾಮದ ಮಹಿಳೆಯೊಬ್ಬರು ತಿಳಿಸಿದ್ದಾರೆ.
ಸರ್ಕಾರದ ಶಕ್ತಿ ಯೋಜನೆ ಜಾರಿಗೆ ತಂದಿರುವುದು ಸಂತಸವಾಗಿದೆ. ಸಾಲ ಮಾಡಿ ಟಂಟಂ ವಾಹನ ತೆಗೆದುಕೊಂಡು ಸಂಚಾರ ಮಾಡುತ್ತಿದ್ದೇನೆ. ನಮ್ಮ ಕೆಲಸಕ್ಕೆ ಹೆಚ್ಚಾಗಿ ಮಹಿಳೆಯರೇ ಆಸರೆ ಆಗಿದ್ದರು.
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಮಹಿಳೆಯರು ಖಾಸಗಿ ವಾಹನಗಳಲ್ಲಿ ಸಂಚಾರ ಮಾಡುತ್ತಿಲ್ಲ. ಇದರಿಂದಾಗಿ ಖಾಸಗಿ ವಾಹನಗಳ ಮಾಲೀಕರ ಹೊಟ್ಟೆ ಮೇಲೆ ಬರೆ ಎಳೆದಂತೆ ಆಗಿದೆ. ಹೀಗಾಗಿ ಸರ್ಕಾರ ನಮ್ಮ ಕಷ್ಟವನ್ನು ಅರ್ಥ ಮಾಡಿಕೊಂಡು ಖಾಸಗಿ ಮಾಲೀಕರಿಗೂ ಒಂದು ಯೋಜನೆ ನೀಡಬೇಕು ಎಂದು ಅಟೊ ಚಾಲಕ ಕೃಷ್ಣ ಆಗ್ರಹಿಸಿದ್ದಾರೆ.