ಬೀದರ್: ರಾಜ್ಯದಲ್ಲಿ 60 ಪರ್ಸೆಂಟ್ ಕಮಿಷನ್ ಸರ್ಕಾರವಿದೆ. ‘ಹಲೋ ಅಪ್ಪಾ’, ಭ್ರಷ್ಟಾಚಾರಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ?’ ಹೀಗೆಂದು ವಿರೋಧ ಪಕ್ಷದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ಆರ್. ಅಶೋಕ್ ವ್ಯಂಗ್ಯವಾಡಿದರು.
ಬೀದರ್ ತಾಲ್ಲೂಕಿನ ಮರಕಲ್, ಚಾಂಬೋಳ ಗ್ರಾಮದಲ್ಲಿ ಬರದಿಂದ ಬೆಳೆ ಹಾನಿಯಾದ ರೈತರ ಹೊಲಗಳಿಗೆ ಬುಧವಾರ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗುತ್ತಿಗೆದಾರರಿಗೆ ಹಣ ಬಿಡುಗಡೆಗೊಳಿಸಿರಲಿಲ್ಲ. ಇತ್ತೀಚೆಗೆ ಒಟ್ಟಿಗೆ ಗುತ್ತಿಗೆದಾರರಿಗೆ ₹750 ಕೋಟಿ ಹಣ ಬಿಡುಗಡೆಗೊಳಿಸಿದ್ದಾರೆ. ಇದಾದ ನಂತರ ಒಂದು ಕಡೆ ₹50 ಕೋಟಿ, ಇನ್ನೊಂದು ಕಡೆ ₹54 ಕೋಟಿ ಐ.ಟಿ. ದಾಳಿಯಲ್ಲಿ ಸಿಕ್ಕಿದೆ. ಈ ಹಣ ಕಾಂಗ್ರೆಸ್ನ ಮಾಜಿ ಎಂಎಲ್ಸಿಗೆ ಸೇರಿದ್ದು ಎಂದು ಗುತ್ತಿಗೆದಾರರು ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕೂಡ ಕಮಿಷನ್ ನಡೆಯುತ್ತಿದೆ ಎಂದು ಹೇಳಿದ್ದಾರೆ. ನಮ್ಮ ಅವಧಿಯಲ್ಲಿ ಯಾವುದೇ ಕಮಿಷನ್ ದಂದೆ ನಡೆಯದಿದ್ದರೂ 40 ಪರ್ಸೆಂಟ್ ಸರ್ಕಾರ, ಪೇಸಿಎಂ ಎಂದು ಅಪಪ್ರಚಾರ ಮಾಡಿದ್ದರು ಎಂದರು.
ಇದು ಎಡಬಿಡಂಗಿ ಸರ್ಕಾರ. ಹಿಂದೆ ನಮ್ಮ ಸರ್ಕಾರವಿದ್ದಾಗ ಕೇಂದ್ರಕ್ಕಾಗಿ ಕಾಯದೇ ರೈತರಿಗೆ ಪರಿಹಾರ ವಿತರಿಸಿದ್ದೆವು. ಸ್ವತಃ ನಾನೇ ಕಂದಾಯ ಸಚಿವನಾಗಿದ್ದೆ. ಎರಡು ಸಲ ಅತಿವೃಷ್ಟಿಯಿಂದ ಹಾನಿಯಾಗಿತ್ತು. ಎನ್ಡಿಆರ್ಎಫ್ ನಿಯಮಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಹಣ ಕೊಟ್ಟಿದ್ದೆವು. ನಮ್ಮ ಖಜಾನೆಯಲ್ಲಿ ಹಣ ಇತ್ತು. ಕೇಂದ್ರದಿಂದ ಹಣ ಬಂದೇ ಬರುತ್ತದೆ. ಅದಕ್ಕಾಗಿ ಕಾಯಬೇಕಿಲ್ಲ. ಆದರೆ, ಈಗಿನ ಸರ್ಕಾರದ ಬಳಿ ಕೊಡಲು ಹಣವಿಲ್ಲ. ಗ್ಯಾರಂಟಿಗಳಿಂದ ಸರ್ಕಾರ ಪಾಪರ್ ಆಗಿದೆ ಎಂದು ಟೀಕಿಸಿದರು.
ನಮ್ಮ ಸರ್ಕಾರವಿದ್ದಾಗ ವಿದ್ಯುತ್ ಪೂರೈಕೆ ಕಡಿತ ಮಾಡುತ್ತಿರಲಿಲ್ಲ. ಈಗ ನಿತ್ಯ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ರೈತರು ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಅವರೇ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಿಸಿದ್ದಾರೆ. ಇದಕ್ಕಾಗಿ ₹1 ಲಕ್ಷಕ್ಕೂ ಅಧಿಕ ಖರ್ಚು ಬರುತ್ತಿದೆ. ಸರ್ಕಾರದ ಬಳಿ ಹಣವಿಲ್ಲ. ಆರು ತಿಂಗಳಾದರೂ ‘ಯುವನಿಧಿ’ ಐದನೇ ಗ್ಯಾರಂಟಿ ಜಾರಿಗೆ ತಂದಿಲ್ಲ. ಸರ್ಕಾರ ಭಿಕ್ಷುಕರ ತರಹ ಆಗಿದೆ ಎಂದು ಆರೋಪಿಸಿದರು.
ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ, ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್, ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ವಿಜಯಕುಮಾರ ಪಾಟೀಲ ಗಾದಗಿ, ಅರಿಹಂತ ಸಾವಳೆ, ಗುರುನಾಥ ಕೊಳ್ಳೂರ್, ಬಾಬುವಾಲಿ, ಮಹೇಶ್ವರ ಸ್ವಾಮಿ ಇತರರಿದ್ದರು.