ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು 14 ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು ಕೋಮುವಾದಿ ಮನೋಭಾವದ ಹಿಂದಿನ ಸರ್ಕಾರ ಆಡಳಿತದಿಂದ ಜನರು ಜರ್ಝರಿತರಾಗಿದ್ದರು. ಕೋವಿಡ್ ಅವಧಿಯಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಹಿಂದಿನ ಸರ್ಕಾರಕ್ಕೆ ಭ್ರಷ್ಟಾಚಾರ ನೀತಿಯೇ ಮುಖ್ಯವಾಗಿತ್ತು. ಅಲ್ಲದೆ ಕೇಂದ್ರದ ರೂಪಾಯಿ ಅಪಮೌಲ್ಯ ನಿರ್ಧಾರದಿಂದ ಒಪ್ಪತ್ತಿನ ಊಟಕ್ಕೂ ಪರದಾಟ ಅನುಭವಿಸಿದ್ದನ್ನು ಕಂಡಿದ್ದೇವೆ ಎಂದು ತಿಳಿಸಿದರು.
ಮುಂದುವರಿದು ತೆಂಗು, ಅಡಕೆ, ದ್ರಾಕ್ಷಿ, ದಾಳಿಂಬೆ ಬೆಳೆ ಸಂಸ್ಕರಣೆಗೆ 10 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ ಮಾಡಲಾಗುವುದು ಎಂದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದರು. ಅನುಗ್ರಹ ಯೋಜನೆ ಮರು ಜಾರಿ ಮಾಡಿ ‘ಕುರಿ ಮೇಕೆ ಮೃತಪಟ್ಟರೆ 5 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ವಿವರಿಸಿದರು.
ಬೆಂಗಳೂರಿಗೆ 45 ಸಾವಿರ ಕೋಟಿ ಅನುದಾನ ಘೋಷಿಸಿದ ಸಿಎಂ, ನಮ್ಮ ಮೆಟ್ರೋಗೆ 30, 000 ಕೋಟಿ ರೂ. ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಕೃಷಿ ಉದ್ಯಮ ಉತ್ತೇಜಿಸಲು ನವ್ಯೋದ್ಯಮ ಯೋಜನೆಗೆ 10 ಕೋಟಿ ರೂ., ಕೃಷಿಭಾಗ್ಯ ಯೋಜನೆಯಲ್ಲಿ ನರೇಗಾ ಯೋಜನೆಯಡಿ 100 ಕೋಟಿ ರೂ., ರೈತರಿಗೆ 3ರಿಂದ 5 ಲಕ್ಷ ರೂ.ಗಳವರೆಗೆ ಅಲ್ಪಾವಧಿ ಸಾಲ ಒದಗಿಸಲಾಗುವುದು ಎಂದು ತಿಳಿಸಿದರು.
ಅಬಕಾರಿ ತೆರಿಗೆ ಶೇ. 20ರಷ್ಟು ಹೆಚ್ಚಳಕ್ಕೆ ಬಜೆಟ್ ನಲ್ಲಿ ನಿರ್ಧರಿಸಲಾಗಿದ್ದು, ಲೋಕೋಪಯೋಗಿ ಇಲಾಖೆಗೆ 10, 143 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 11,173 ಕೋಟಿ ರೂ., ಆಹಾರ ಇಲಾಖೆಗೆ 10,460 , ಮೈಸೂರು ಕಲಬುರಗಿ ಯಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆಗೆ 30 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.