ಬೀದರ್: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ್ ಖಂಡ್ರೆ ಅವರಿಗೆ ಜಿಲ್ಲಾ ಮರಾಠಾ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಬೀದರ ನಗರದಲ್ಲಿ ಭರ್ಜರಿಯಾಗಿ ಸ್ವಾಗತಿಸಲಾಯಿತು.
ಬೀದರ್ ಜಿಲ್ಲೆಯ ಮರಾಠ ಯುವ ಸಮಾಜದ ಸಾವಿರಾರು ಕಾರ್ಯಕರ್ತರು ಬೀದರ್ ನಗರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಸೇರಿಕೊಂಡು ಸಾಗರ್ ಖಂಡ್ರೆ ಅವರ ಪರ ಪಟಾಕಿ ಸಿಡಿಸಿ ಜಯಘೋಷ ಹಾಕುವ ಮೂಲಕ ಬೆಂಬಲವನ್ನು ಸೂಚಿಸಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಾಗರ್ ಖಂಡ್ರೆ ಅವರು ಶ್ರೀ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಶಿವಾಜಿ ವೃತ್ತದಿಂದ ನೌಬಾದನ ಆಟೋ ನಗರದಲ್ಲಿರುವ ಮರಾಠಾ ಸಮುದಾಯ ಭವನದಲ್ಲಿ ಸಾವಿರಾರು ಯುವ ಮರಾಠ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಸಾಗರ್ ಖಂಡ್ರೆ ಪಾಲ್ಗೊಂಡಿದ್ದರು.
ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪ ನಮನಗಳನ್ನು ಸಲ್ಲಿಸಿ ಸಭೆಯನ್ನು ಉದ್ದೇಶಿಸಿ ಸಾಗರ ಖಂಡ್ರೆ ಮಾತನಾಡಿದರು. ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ಅವರ ಆಡಳಿತ ನಮ್ಮೆಲ್ಲರಿಗೂ ಆದರ್ಶವಾಗಿದ್ದು ಈ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿ ಶಿವಾಜಿ ಮಹಾರಾಜರ ಆಶಯದಂತೆ ಸರ್ವ ಸಮುದಾಯದ ಏಳಿಗೆಗಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮರಾಠ ಸಮಾಜದ ಅನೇಕ ಯುವಕರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು