ಬೀದರ್ : ‘ಉದ್ಯಮಶೀಲತೆ ಸಂಶೋಧನೆ ಮತ್ತು ವ್ಯವಹಾರ ಇನ್ಕ್ಯುಬೇಷನ್ (ಜಿಎನ್ಜೆಇಆರ್ಬಿಐ) ಫೌಂಡೇಷನ್ ಅಡಿಯಲ್ಲಿ ಅಂತರ್ಗತ ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್ (ಐ-ಟಿಬಿಐ) ಕೇಂದ್ರ ಸ್ಥಾಪಿಸಲು ಅನುಮತಿ ಸಿಕ್ಕಿದ್ದು, ಆವಿಷ್ಕಾರ ಕೈಗೊಳ್ಳಲು, ನವೋದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುವುದು’ ಎಂದು ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್ ತಿಳಿಸಿದರು.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐಟಿಬಿಐ ಕೇಂದ್ರದಿಂದ ಸಂಪೂರ್ಣ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಯೋಜನವಾಗಲಿದೆ. ಅದರಲ್ಲೂ ಎಲ್ಲಾ ಯುವ ಉದ್ಯಮಿದಾರರಿಗೆ ಸಹಾಯವಾಗಲಿದೆ. ಹೆಚ್ಚಿನ ಸಂಶೋಧನೆ, ಹೊಸ ಉತ್ಪನ್ನಗಳಿಗೆ ಬೇಕಾಗುವ ಮೂಲ ಸೌಕರ್ಯಗಳನ್ನು ಒದಗಿಸಲು ₹10 ಲಕ್ಷದ ವರೆಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದರು.
ಆಸಕ್ತ ಕಲ್ಯಾಣ ಕರ್ನಾಟಕ ಮತ್ತು ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು, ರೈತಾಪಿ ವರ್ಗ, ನವೋದ್ಯಮಿಗಳು ಮೊಬೈಲ್ ಸಂಖ್ಯೆ : 9902424263 ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್, ಪ್ರಾಂಶುಪಾಲ ಧನಂಜಯ್ ಎಂ. ಹಾಜರಿದ್ದರು.