ಔರಾದ್: ಪಟ್ಟಣದಲ್ಲಿ ರಾಜ್ಯ ಸರ್ಕಾರಿ ನೌಕರರು ಬುಧವಾರ ನಡೆಸಿದ ಮುಷ್ಕರದಿಂದಾಗಿ ಸಾರ್ವಜನಿಕರು ಪರದಾಡುವಂತಾಯಿತು. ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಕಚೇರಿಗಳಿಗೆ ಬಾರದಿದ್ದರಿಂದ ಜನ ತೊಂದರೆ ಎದುರಿಸಬೇಕಾಯಿತು. ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್ ಕಚೇರಿ ಸೇರಿದಂತೆ ಬಹುತೇಕ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೆ ಬಿಕೋ ಎನ್ನುತ್ತಿದ್ದವು.
ಗ್ರಾಮೀಣ ಪ್ರದೇಶದ ಜನರಿಗೆ ಮುಷ್ಕರದ ಬಗ್ಗೆ ಮಾಹಿತಿ ಇಲ್ಲದ ಕಾರಣ ಕಚೇರಿಗೆ ಬಂದು ವಾಪಸ್ ಹೋಗಬೇಕಾಯಿತು.
‘ನನಗೆ ದಾಖಲೆ ವಿಭಾಗದಲ್ಲಿ ಕೆಲಸ ಇದೆ. ನಿನ್ನೆ ಬಂದಾಗ ನಾಳೆ ಬನ್ನಿ ಎಂದು ಹೇಳಿದ್ದರು. ಇಂದು ಇಲ್ಲಿ ಯಾರೂ ಇಲ್ಲ ಎಂದು ತಹಶೀಲ್ದಾರ್ ಕಚೇರಿಗೆ ಬಂದಿದ್ದ ಬಾವಲಗಾಂವ್ ಗ್ರಾಮದ ಅರ್ಜುನ ದಂಪತಿ ಹೇಳಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಹೊರ ರೋಗಿಗಳ ತಪಾಸಣೆ ಇರಲಿಲ್ಲ. ಅನೇಕ ರೋಗಿಗಳು ವೈದ್ಯರಿಗಾಗಿ ಕಾದು ಕುಳಿತಿದ್ದರು. ಇಂದು ಮುಷ್ಕರ ಇದೆ ಎಂದು ಆಸ್ಪತ್ರೆ ಸಿಬ್ಬಂದಿ ಅವರಿಗೆ ಮನೆಗೆ ಕಳುಹಿಸಿದರು. ಬೆಳಿಗ್ಗೆ ಸ್ವಲ್ಪ ಸಮಸ್ಯೆಯಾಗಿದೆ. ಮಧ್ಯಾಹ್ನದ ನಂತರ ತಾಲ್ಲೂಕಿನ ಎಲ್ಲ ಆಸ್ಪತ್ರೆಯಲ್ಲಿ ಹೊರ ರೋಗಿಗಳ ತಪಾಸಣೆ ಶುರುವಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ ತಿಳಿಸಿದ್ದಾರೆ.