ಚಿಟಗುಪ್ಪ: ‘ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಜಿಲ್ಲೆಯ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸುವಲ್ಲಿ ವಿಫಲವಾಗಿದೆ.
ಸಾವಿರಾರು ರೈತರ ಆಸ್ತಿಯಾಗಿದ್ದ ಕಾರ್ಖಾನೆಯನ್ನು ಅಳಿವಿನಂಚಿಗೆ ತಂದಿರುವ ಬಿಜೆಪಿ ಸಂಪೂರ್ಣವಾಗಿ ರೈತರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ’ ಎಂದು ಆಮ್ ಆದ್ಮಿ ಪಕ್ಷದ ನಾಯಕ ನಸಿಮೋದ್ದೀನ್ ಪಟೇಲ್ ಆರೋಪಿಸಿದರು.
ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ನಡೆದ ಪಕ್ಷದ ಚುನಾವಣಾ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಬೀದರ್ ದಕ್ಷಿಣ ಕ್ಷೇತ್ರವನ್ನು ಉದ್ಯಮಿ, ನುರಿತ ರಾಜಕಾರಣಿಗಳು ಆಳ್ವಿಕೆ ಮಾಡಿದ್ದರೂ ಇದುವರೆಗೂ ಮನ್ನಾಎಖ್ಖೇಳಿ ಗ್ರಾಮದಲ್ಲಿ ನೆಮ್ಮದಿ ಕೇಂದ್ರ ಆರಂಭಿಸಿಲ್ಲ. ಅಗ್ನಿಶಾಮಕ ಠಾಣೆಗೆ ಮಂಜೂರಾತಿ ಪಡೆಯಲಿಲ್ಲ. ಕೈಗಾರಿಕೆ ಆರಂಭಿಸಲಿಲ್ಲ. ಜನರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಕಾರ್ಯ ನಡೆದಿಲ್ಲ. ಎಲ್ಲರೂ ಕೇವಲ ಭಾಷಣದಲ್ಲಿಯೇ ಮತದಾರರಿಗೆ ವಾಗ್ದಾನ ಮಾಡುವ ಮೂಲಕ ಮೋಸ ಮಾಡುತ್ತ ಬಂದಿದ್ದಾರೆ ಎಂದರು.
ಪಕ್ಷದ ವೀಕ್ಷಕ ಸಾಸಿ ತಡಕಲ್ ಮಾತನಾಡಿ,’ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಬೂತ್ ಮಟ್ಟದಲ್ಲಿ ಕನಿಷ್ಠ ಇಪ್ಪತ್ತು ಕಾರ್ಯಕರ್ತರಿರಬೇಕು. ಹಿಂದುಳಿದ, ಪರಿಶಿಷ್ಟ ಘಟಕ, ವಿದ್ಯಾರ್ಥಿ ಕೂಟ, ಆಟೋ ಚಾಲಕರ ಹಾಗೂ ರೈತರ ಒಕ್ಕೂಟ ರಚಿಸಬೇಕು’ ಎಂದು ಹೇಳಿದರು.
ಅಯೂಬ್ ಮಿಯ್ಯ, ಮನ್ನಾನ ಪಟೇಲ್, ಬಾಬುಮಿಯ್ಯ, ಮಹ್ಮದ್ ಸೌದಾಗರ್, ತಾಜೋದ್ದಿನ್, ಧನರಾಜ್, ಆಮ್ ಆದ್ಮಿ ಪಕ್ಷದ ದಕ್ಷಿಣ ಘಟಕದ ಅಧ್ಯಕ್ಷ ಶರೀಫ್ ಮಿಯ್ಯ, ಕುಪೇಂದ್ರ, ಅಕ್ರಮ ಜಮಾದಾರ್, ತುಳಸಿರಾಮ್, ಶ್ರೀನಿವಾಸರಡ್ಡಿ, ಶಿವಕುಮಾರ ಬಸಿಲಾಪುರ್, ಅಶೋಕ ಕುಮಾರ್, ಶ್ರೀಕಾಂತ ಶೇರಿಕಾರ್ ಹಾಗೂ ಪ್ರಭು ಬಗದಲ್ ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.