ಬೀದರ್: ಕಾರಂಜಾ ಜಲಾಶಯದಲ್ಲಿ ಮೊಸಳೆಯೊಂದು ಸಾವನ್ನಪ್ಪಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳ ಹಿಂದೆಯೇ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿಯಿರುವ ಕಾರಂಜಾ ಜಲಾಶಯ ಗೇಟ್ 2ರಲ್ಲಿ ಸಿಲುಕಿಕೊಂಡು ಮೊಸಳೆ ಮೃತಪಟ್ಟ ಶಂಕೆ ವ್ಯಕ್ತವಾಗಿದೆ.
ಕುಡಿಯುವ ನೀರಿಗಾಗಿ ಜಲಾಶಯದಿಂದ ಎಪ್ರಿಲ್ 15 ರಿಂದ 25 ರ ವರೆಗೆ ಹತ್ತು ದಿನ ನೀರು ಹೊರ ಬಿಟ್ಟಾಗ ಮೊಸಳೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಜಲಾಶಯದ 2ನೇ ಗೇಟ್ ನಲ್ಲಿ ಮೊಸಳೆ ಸಿಲುಕಿಕೊಂಡು ಸಾವನಪ್ಪಿರುವ ಬಗ್ಗೆ ಜಲಾಶಯದ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಮೊಸಳೆ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿದ್ದಾರೆ. RFO ಪ್ರವೀಣ್ ಕುಮಾರ್ ಮೋರೆ, DRFO ಶಿವಾನಂದ ಬಿರಾದಾರ ಸಮ್ಮುಖದಲ್ಲಿ ಪೋಸ್ಟ್ ಮಾರ್ಟಂ ಕಾರ್ಯ ಮುಗಿಸಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಅಂತ್ಯಕ್ರಿಯೆ ನೆರವೇರಿಸಿದರು. ಮೃತ ಮೊಸಳೆಯ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳುಹಿಸಲಾಗಿದೆ.
ಇನ್ನು ಬೀದರ್ ಜಿಲ್ಲೆಯ ಭಾಲ್ಕಿ, ಕಮಲನಗರ, ಔರಾದ್ ಹಾಗೂ ಭಾತಂಬ್ರಾ ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ ನೀರು ಹೊರ ಬಿಡುಲಾಗಿದೆ ಎಂದು ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.