ಭಾಲ್ಕಿ: ‘ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ, ಮಧ್ಯಾಹ್ನ ಉಪಹಾರ ಯೋಜನೆಯ ಅಡುಗೆ ಸಿಬ್ಬಂದಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ್ ಹುಸೇನ್ ಹೇಳಿದರು. ತಾಲ್ಲೂಕಿನ ಕಲವಾಡಿ ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಬೀದರ್, ಅಕ್ಷರ ದಾಸೋಹ ಯೋಜನೆ ಸಹಾಯಕ ನಿದೇರ್ಶಕರ ಕಾರ್ಯಾಲಯ ಭಾಲ್ಕಿ ವತಿಯಿಂದ ಆಯೋಜಿಸಿದ್ದ ಮಧ್ಯಾಹ್ನದ ಉಪಹಾರ ಯೋಜನೆಯ ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಸಿಯೂಟದ ಅಡುಗೆ ಸಿಬ್ಬಂದಿ ನೂರಾರು ಮಕ್ಕಳ ತಾಯಂದಿರಾಗಿರುತ್ತಾರೆ. ಶಾಲೆಯ ಎಲ್ಲಾ ಮಕ್ಕಳು ಅವರನ್ನು ಮಾತೆಯೆಂದು ಗೌರವಿಸುವರು. ಸರ್ಕಾರ ಕೊಡುವ ಸಹಾಯ ಧನಕ್ಕಿಂತಲೂ ಅವರಿಗೆ ಮಕ್ಕಳ ಪ್ರೀತಿ, ವಿಶ್ವಾಸ ತುಂಬಾ ಮುಖ್ಯವಾಗಿರುತ್ತದೆ’ ಎಂದು ತಿಳಿಸಿದರು.
ಅಕ್ಷರ ದಾಸೋಹ ಯೋಜನೆ ಸಹಾಯಕ ನಿದೇರ್ಶಕ ಮಲ್ಲಿನಾಥ ಸಜ್ಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾತ್ಮ ಗಾಂಧಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಿರಣಕುಮಾರ ಭಾಟಸಾಂಗವಿ, ಎಆರ್ಎಫ್ಒ ಸುಭಾಷ, ಡಾ.ವಿಜಯಲಕ್ಷ್ಮಿ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ದಿಗಂಬರ, ನರಸಿಂಗ ವಡ್ಡೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ವಿವಿಧ ಕ್ಲಸ್ಟರ್ಗಳ ಅಡುಗೆ ಸಿಬ್ಬಂದಿ ತಯಾರಿಸಿದ ಅಡುಗೆ ರುಚಿಯನ್ನು ಸವಿದು ಅವರಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು. ಕಸಾಪ ತಾಲ್ಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ನಾಗನಾಥ, ಮುಖ್ಯಶಿಕ್ಷಕಿ ಮಿಲಿಂದಾ, ಅಂಗನವಾಡಿ ಕಾರ್ಯಕರ್ತೆ ರೇಣುಕಾ, ಪೋಷಕರ ಪ್ರತಿನಿಧಿ ಪವಿತ್ರಾ, ಅಂಬಿಕಾ, ಸಿಆರ್ಪಿ ಸಂತೋಷ, ಅಶೋಕ ಕಲ್ಯಾಣೆ, ಮಹೇಶ ಉಪಸ್ಥಿತರಿದ್ದರು.