ಬೀದರ್ (ಭಾಲ್ಕಿ): ಕೂಲಿ ಹೆಚ್ಚಳವಾದ ಕಾರಣ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಹೊಲದಲ್ಲಿನ ಕಳೆ ತೆಗೆಯುವುದು ತುಂಬಾ ಕಷ್ಟಕರ ಕೆಲಸ. ಆದರೆ ಸೈಕಲ್ ವಿಡರ್ ಯಂತ್ರ ಅವರ ನೆರವಿಗೆ ಬರುತ್ತಿದೆ.
ಈ ಕಳೆನಾಶಕ ಯಂತ್ರಕ್ಕೆ ಎಣ್ಣೆ ಹಾಕಬೇಕಿಲ್ಲ. ಪೆಟ್ರೋಲ್, ಡೀಸೆಲ್ ಅವಶ್ಯಕತೆಯೂ ಇಲ್ಲ. ಯಂತ್ರ ಹಿಡಿದು ಮುನ್ನೆಡೆದರೆ ಸಾಕು ಕಳೆ ತನ್ನಿಂದ ತಾನೆ ಕಿತ್ತು ಬೀಳುತ್ತದೆ.
ಹೋಬಳಿಯ ಚಳಕಾಪುರ, ಮದಕಟ್ಟಿ, ಸೇರಿದಂತೆ ಇನ್ನಿತರ ಗ್ರಾಮಗಳ ಸಣ್ಣ ರೈತರು ಉದ್ದು, ಸೋಯಾ, ಹೆಸರು ಹಾಗೂ ತೊಗರಿ ಬೆಳೆಗಳ ಸಾಲಿನಲ್ಲಿ ಬೆಳೆದ ಕಳೆಯನ್ನು ತೆಗೆಯಲು ಈ ಕಳೆನಾಶಕ ಸೈಕಲ್ ಎಡೆಕುಂಟೆ ಬಳಸುತ್ತಿರುವುದು ಕಂಡುಬರುತ್ತಿದೆ.
ಸಾಮಾನ್ಯವಾಗಿ ರೈತರು ಭೂಮಿ ಹದ ಮಾಡಿಕೊಂಡು ಹತ್ತಾರು ದಿನಗಳ ನಂತರ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಕೆಲ ದಿನಗಳಲ್ಲಿ ಬೀಜ ಮೊಳಕೆ ಒಡೆದು ಬೆಳೆಯುತ್ತದೆ. ಮೊಳಕೆ ಒಡೆದ ಬೆಳೆಗೆ ಕಳೆ (ಕಸ) ವಿಪರೀತ ಕಾಡುತ್ತಿರುತ್ತದೆ. ಆ ಕಳೆ ತೆಗೆಸಲು ರೈತರು ಕಳೆನಾಶಕ ಸಿಂಪಡಿಸುತ್ತಾರೆ. ಆದರೂ ಕಳೆ ಮಾತ್ರ ಹೋಗಲ್ಲ. ಹೀಗಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ರೈತರು ಚಿಂತೆಗೀಡಾಗುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ರೈತರು ₹ 500- ₹1 ಸಾವಿರ ವೆಚ್ಚ ಮಾಡಿ ಬಾಡಿಗೆ ಎತ್ತು ಮತ್ತು ಕೂಲಿ ಕಾರ್ಮಿಕರನ್ನು ತಂದು ಕಳೆ ತೆಗೆಸಬೇಕಾಗುತ್ತದೆ. ಮುಂಗಾರು ವೇಳೆ ಬಾಡಿಗೆ ಎತ್ತುಗಳು ಸಹ ದೊರೆಯುವುದಿಲ್ಲ. ದೊರೆತರೂ ಕೂಲಿ ಕಾರ್ಮಿಕರ ಮೂಲಕ ಕಳೆ ತೆಗೆಸಲು ಅಧಿಕ ಹಣ ವ್ಯಯ ಮಾಡಬೇಕಾಗುತ್ತದೆ.
ಒಂದೆರಡು ಎಕರೆಯಲ್ಲಿ ಬೆಳೆ ಬೆಳೆಯುವ ರೈತರಿಗೆ ಸೈಕಲ್ ವೀಡರ್ ಸಾಕಷ್ಟು ಪ್ರಯೋಜನಕಾರಿ. ಸೈಕಲ್ ವೀಡರನ್ನು ಕಳೆಯ ಎತ್ತರ, ಭೂಮಿಯ ತೇವಾಂಶಕ್ಕೆ ಅನುಗುಣವಾಗಿ ಬಳಸಿಕೊಳ್ಳಬಹುದು. ಬೆಳೆ ಬಿತ್ತನೆಯಾದ 20 ರಿಂದ 30 ದಿನಗಳ ಅಂತರದಲ್ಲಿ ಸೈಕಲ್ ವೀಡರ್ನಿಂದ ಕಳೆ ತೆಗೆಯಬಹುದು ಎಂದು ರೈತರಾದ ಧನರಾಜ ಮುತ್ತಂಗೆ ತಿಳಿಸುತ್ತಾರೆ.
ಸಾಮಾನ್ಯವಾಗಿ ಬೆಳೆಗಳ ಮಧ್ಯೆ ಇರುವ 30ರಿಂದ 40 ಸೆಂ.ಮೀ ಅಂತರಗಳ ಸಾಲುಗಳನ್ನು ನೋಡಿಕೊಂಡು ಈ ಯಂತ್ರ ಸಿದ್ಧಪಡಿಸಲಾಗುತ್ತದೆ.
ಈ ಸೈಕಲ್ ವೀಡರ್ ಮುಂಭಾಗದ ಯಂತ್ರ ಮಣ್ಣನ್ನು ಸಡಿಲಗೊಳಿಸಿ ಕಳೆ ಕಿತ್ತುಹಾಕುತ್ತದೆ ಎಂದು ಚಳಕಾಪುರ ವಾಡಿ ಗ್ರಾಮದ ರೈತ ಅನಿಲ ಜಾಧವ ತಿಳಿಸುತ್ತಾರೆ.