ಬೀದರ್: ಹುಲಸೂರ ತಾಲೂಕಿನಲ್ಲಿ ಅಂತರ್ಜಲಮಟ್ಟ ಕುಸಿದಿದ್ದು, ಸಾವಿರ ಅಡಿಗಳಷ್ಟು ಒಳಗಿನಿಂದ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣ ಮಾಡಿದ್ದರೂ ಜನಸಾಮಾನ್ಯರಿಗೆ ಪ್ರಯೋಜನವಾಗುತ್ತಿಲ್ಲ ಎಂದು ವಿವಿಧ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ಸಮಸ್ಯೆ ಒಂದಲ್ಲ, ಎರಡಲ್ಲ ಹುಲಸೂರ ತಾಲ್ಲೂಕಿನ ಸಮೀಪದ 7 ಗ್ರಾಮಗಳ ಜನ ಶುದ್ದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸೈಕಲ್, ಬೈಕ್, ಕೈಗಾಡಿಗಳ ಮೇಲೆ ಕೊಡಗಳನ್ನು ಇಟ್ಟುಕೊಂಡು ಶುದ್ಧ ನೀರಿಗಾಗಿ ಅಲೆದಾಡ ತೊಡಗಿದ್ದಾರೆ.
ಗಡಿರಾಯಪಳ್ಳಿ, ಹುಲಸೂರ, ಮೆಹಕರ, ಮಾಣಿಕೆಶ್ವರ, ಮಿರಖಲ, ಅಂಬೆವಾಡಿ, ಕೋಟಮಾಳ, ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಎರಡು ವರ್ಷಗಳಿಂದ ದುರಸ್ತಿಗೆ ಬಂದಿದ್ದು, ಸ್ಥಳೀಯ ನಿವಾಸಿಗಳು ಕುಡಿವ ನೀರಿಗೆ ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ.
ಕೊಳವೆಬಾವಿಗಳಿಂದ ಬರುವ ನೀರಿಗೂ ಘಟಕದ ನೀರಿಗೂ ವ್ಯತ್ಯಾಸವೇ ಇಲ್ಲ. ಇದು ಜನರಿಗೆ ಗೊತ್ತಾಗುತ್ತಿಲ್ಲ. ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಶುದ್ಧ ಕುಡಿಯುವ ನೀರಿನ ಹೆಸರಿನಲ್ಲಿ ಅಶುದ್ಧ ನೀರು ಕೊಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಶುದ್ಧ ಕುಡಿಯುವ ನೀರಿನ ಘಟಕ ಗುತ್ತಿಗೆ ಪಡೆದವರಿಗೆ 4 ವರ್ಷಗಳ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಡಲಾಗಿತ್ತು. ಹಣ ಪಡೆದವರು ನಿರ್ವಹಣೆಯನ್ನೇ ಮಾಡದೇ ಪರಾರಿಯಾಗಿದ್ದಾರೆ. ಮೂರ್ನಾಲ್ಕು ವರ್ಷ ಹಳೆಯದಾದ ಘಟಕಗಳಲ್ಲಿ ಫಿಲ್ಟರ್ ಕೆಟ್ಟು ನಿಂತಿವೆ. ಹೀಗಾಗಿ ನೀರು ಶುದ್ಧೀಕರಣವೇ ಆಗುತ್ತಿಲ್ಲ.
‘ಸರ್ಕಾರ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ನಿರ್ಮಿಸಿದ ಶುದ್ಧ ನೀರಿನ ಘಟಕಗಳನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿರುವುದು ಸರಿಯಲ್ಲ. ತಕ್ಷಣವೇ ಇಲ್ಲಿನ ಶುದ್ಧ ಕುಡಿವ ನೀರಿನ ಘಟಕ ಸರಿಪಡಿಸಲು ಮುಂದಾಗಬೇಕು’ ಎಂದು ವಿವಿಧ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಫಿಲ್ಟರ್ಗಳು ಕೆಟ್ಟು ನಿಂತಿರುವುದರಿಂದಾಗಿ ಘಟಕದಿಂದ ಜನರು ಪಡೆಯುತ್ತಿರುವ ನೀರು ವಿಷ ಮುಕ್ತ, ರೋಗಾಣು ಇಲ್ಲದ ಅಥವಾ ಪರಿಶುದ್ಧ ಎಂಬುದನ್ನು ಹೇಳುವಂತಿಲ್ಲ. ಘಟಕದ ನೀರು ಶುದ್ಧೀಕರಣವಾಗಿರುತ್ತದೆ ಎಂದು ನಂಬಿ ಜನರು ಕುಡಿಯುತ್ತಿದ್ದಾರೆ. ಈ ಬಗ್ಗೆ ಇಲಾಖೆ ನಿಗಾವಹಿಸಿಲ್ಲ ಎಂದು ದೂರುಗಳೂ ಇವೆ.