ಬೀದರ್, ಅ.20: ನಿರಂತರ ಪ್ರಯತ್ನದಿಂದಾಗಿ ಕೇಂದ್ರಿಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಇಂದು ಬೀದರ ಜಿಲ್ಲೆಯಲ್ಲಿ ಚಾಲೆನೆಗೊಳ್ಳುತ್ತಿದೆ . ಬರುವ ದಿನಗಳಲ್ಲಿ ಸಿಪೆಟ್ ಜಿಲ್ಲೆಯ ಯುವಕರಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲಿದೆ ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.
ಅವರು ಶುಕ್ರವಾರ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ( ಸಿಪೆಟ್ ) , ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಇಲಾಖೆ ನವದೆಹಲಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಬೀದರ್ ವಿಶ್ವವಿದ್ಯಾಲಯ ಜ್ಞಾನಕಾರಂಜಿ , ಹಾಲಹಳ್ಳಿ ( ಕೆ ) ಬೀದರ್ನಲ್ಲಿ ಸಿಪೆಟ್ನ ತಾತ್ಕಾಲಿಕ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿರುವ ಸಿಪೆಟ್ ಸಂಸ್ಥೆಯು ದೇಶದ ಪಾಲಿಮರ್ ಉದ್ಯಮ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ನೂತನ ಸಂಶೋಧನೆ ಹಾಗೂ ಅವಿಷ್ಕಾರಗಳನ್ನು ಕೈಗೊಳ್ಳುತ್ತಿದೆ ಹಾಗೂ ಕರ್ನಾಟಕ ರಾಜ್ಯದ ಆಸಕ್ತ ನಿರುದ್ಯೋಗ ಅಭ್ಯರ್ಥಿಗಳಿಗೆ ತರಬೇತಿ ನೀಡಿ , ಉದ್ಯೋಗವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ.
ಈಗ ಈ ಸಂಸ್ಥೆಯನ್ನು ಮೈಸೂರಿನ ಉಪ ಘಟಕವಾಗಿ ಮಹಾನಿರ್ದೇಶಕರು ಮತ್ತು ಮುಖ್ಯಸ್ಥರು , ಸಿಪೆಟ್ , ಚೆನೈ ಮತ್ತು ಬೀದರ್ ಯೂನಿವರ್ಸಿಟಿ ಅವರು ಜಂಟಿಯಾಗಿ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಪರಸ್ಪರ ಒಡಂಬಡಿಕೆಯನ್ನು ಮಾಡಿಕೊಂಡು ಇಂದು ಬೀದರ ಸಿಪೆಟ್ ಸಂಸ್ಥೆಯು ತಾತ್ಕಾಲಿಕವಾಗಿ ಪ್ರಾರಂಭಿಸುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ ಎಂದು ಹೇಳಿದರು . ಬರುವ ದಿನಗಳಲ್ಲಿ ಈ ಸಂಸ್ಥೆಯು 100 ಕೋಟಿ ಅನುದಾನದಲ್ಲಿ ಸ್ವಂತ ಕಟ್ಟಡದೊಂದಿಗೆ ಆರಂಭವಾಗಲಿದೆ.
ಸಧ್ಯ ಪ್ರಾರಂಭವಾಗುತ್ತಿರುವ ಸಿಪೆಟ್ ಸಂಸ್ಥೆಯಲ್ಲಿ ಪ್ಲಾಸ್ಟಿಕ್ಸ್ ಪ್ರೋಸಸಿಂಗ್ ಮಷಿನ್ ಅಪರೇಷನ್ ಹಾಗೂ ಇಂಜಕ್ಷನ್ ಮೋಲ್ಡಿಂಗ್ ಮಷಿನ್ ಅಪರೇಷನ್ ಅಂಡ್ ಮೆಂಟ್ನೆನ್ಸ್ ಕೋರ್ಸುಗಳಿಗೆ ತರಬೇತಿ ನೀಡಲಾಗುವುದು . ಮುಂಬರುವ ದಿನಗಳಲ್ಲಿ ಡಿಪ್ಲೋಮ ಇನ್ ಪ್ಲಾಸ್ಟಿಕ್ ಮೋಲ್ಡ್ ಟೆಕ್ನಾಲಜಿ ಮತ್ತು ಡಿಪ್ಲೋಮ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ ಕೋರ್ಸುಗಳನ್ನು ಪ್ರಾರಂಭಿಸಲಾಗುತ್ತದೆ . ಪ್ರಸ್ತುತ ದೇಶದಲ್ಲಿ ಪಾಲಿಮರ್ ಕ್ಷೇತ್ರದಲ್ಲಿ ಪ್ರತಿ ವರ್ಷ 75 ಸಾವಿರ ಉದ್ಯೋಗ ಅವಕಾಶ ಯುವಕರಿಗೆ ಇರುತ್ತವೆ . ಆದರೆ ನಮ್ಮ ಭಾಗದ ಯುವಕರಲ್ಲಿ ವ್ಯವಸ್ಥಿತ ತರಬೇತಿ ಇರದ ಕಾರಣ ನಮ್ಮಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತಿರಲಿಲ್ಲ , ಆದರೆ ಬರುವ ದಿನಗಳಲ್ಲಿ ಈ ಸಮಸ್ಯೆಯನ್ನು ಸಿಪೆಟ್ ಸಂಸ್ಥೆ ನೀಗಿಸಲಿದೆ ಎಂದು ಹೇಳಿದರು.
ಬೀದರ ವಿಶ್ವವಿದ್ಯಾಲಯದ ಕುಲಪತಿ ಬಿ.ಎಸ್.ಬಿರಾದಾರ ಮಾತನಾಡಿ , ಬೀದರ್ ಜಿಲ್ಲೆಯು ಹಿಂದುಳಿದಿದೆ ಎಂಬ ಹಣೆಪಟ್ಟಿಯಿಂದ ಹೊರಬರಬೇಕಾದರೆ ಜಿಲ್ಲೆಯಲ್ಲಿ ಸಿಪೆಟ್ ಅಂತಹ ಪ್ರತಿಷ್ಠಿತ ಸಂಸ್ಥೆಗಳು ಬಂದಾಗ ಮಾತ್ರ ಈ ಹಣೆಪಟ್ಟಿಯಿಂದ ಹೊರಬರಲು ಸಾಧ್ಯ . ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ ಪ್ರತಿ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗವಕಾಶ ದೊರೆಯುವಂತಾಗಬೇಕು . ಇಂತಹ ಮನೋಭಾವದಿಂದ ನಮ್ಮ ಜಿಲ್ಲೆಯ ಸಂಸದರು ಹಲವಾರು ನಿರುದ್ಯೋಗಿ ಯುವಕ – ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಸಿಪೆಟ್ ಅಂತಹ ಹೊಸ ಸಂಸ್ಥೆ ನಮ್ಮ ಜಿಲ್ಲೆಗೆ ತಂದಿದ್ದಾರೆ . ಬೀದರ ಜಿಲ್ಲೆಯ ಜನರು ಹೃದಯವಂತರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಮನಾಬಾದ ಶಾಸಕ ಡಾ.ಸಿದ್ಧಲಿಂಗಪ್ಪ ಎನ್.ಪಾಟೀಲ , ಬ್ಯಾಲಹಳ್ಳಿ ( ಕೆ ) ಗ್ರಾಮ ಪಂಚಾಯತ ಅಧ್ಯಕ್ಷ ಅಶೋಕ ಚವ್ಹಾಣ , ರಸಾಯನಿಕ ಮತ್ತು ರಸಗೊಬ್ಬರ ಖಾತೆಯ ಜಂಟಿ ಕಾರ್ಯದರ್ಶಿ ಅಮಿತ ಮಿಶ್ರಾ , ಸಿಪೆಟ್ ಮಹಾನಿರ್ದೇಶಕ ಪ್ರೊಡಾ.ಶಿಶೀರ್ ಸಿನ್ಹಾ , ಸಿಪೆಟ್ ಮುಖ್ಯಸ್ಥರಾದ ಡಾ.ದೀಪಕ ಮಿಶ್ರಾ , ಮೈಸೂರಿನ ಸಿಪೆಟ್ , ಸಿಎಸ್ಟಿಎಸ್ ಮುಖ್ಯಸ್ಥ ಆರ್.ಬಿ.ನಾಗರಳ್ಳಿ, ಬೀದರ ವಿಶ್ವವಿದ್ಯಾಲಯದ ಕುಲಸಚಿವ ಪ್ರೋ.ಪರಮೇಶ್ವರ ನಾಯಕ ಟಿ . , ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾಗಭೂಷನ ಕಮಠಾಣೆ , ಬೀದರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು , ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.