ಬೀದರ್: ಸಾಮಾನ್ಯವಾಗಿ ಹಾವು ಬಂತೆಂದರೆ ಸಾಕು ಎಲ್ಲರೂ ದೂರ ಸರಿಯುವವರೇ ಹೆಚ್ಚು. ಆದರೆ ಯುವಕ ಚಂದ್ರಕಾಂತ ವಾಡೆ ಹಾವು ಕಂಡು ಬಂತೆಂದರೆ ಸಾಕು ಅದು ಇದ್ದಲ್ಲಿಗೆ ಹೋಗಿ ಅದನ್ನು ಹಿಡಿದು ಕಾಡಿಗೆ ಬಿಡುವ ಕಾಯಕದಲ್ಲಿ ತೊಡಗಿದ್ದಾರೆ.
ಸಮೀಪದ ಚಳಕಾಪುರ ಗ್ರಾಮದ ಯುವಕ ಚಂದ್ರಕಾಂತ ವಾಡೆ ಚಾಣಾಕ್ಷತೆಯಿಂದ ಹಾವು ಹಿಡಿಯುವ ಸಾಹಸಿಯಾಗಿ ಗುರುತಿಸಿಕೊಂಡಿದ್ದು, ಐಟಿಐ ವಿದ್ಯಾಭ್ಯಾಸ ಮುಗಿಸಿರುವ ಅವರು ಗ್ರಾಮದಲ್ಲಿಯೇ ತೆಂಗಿನಕಾಯಿ ಅಂಗಡಿ ಇಟ್ಟುಕೊಂಡಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಚಂದು, ಹಾವನ್ನು ಹಿಡಿಯುವುದನ್ನು ಪ್ರವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಹಾವನ್ನು ತೊಂದರೆಯಾಗದಂತೆ ಹಿಡಿದು ಸಮೀಪದ ಕಾಡಿಗೆ ಬಿಟ್ಟು ಬರುತ್ತಾರೆ.
ಈವರೆಗೆ ಸುಮಾರು ಹಾವುಗಳನ್ನು ಹಿಡಿದು ಮೈಲಾರನ ಕಾಡಿಗೆ ಬಿಟ್ಟಿದ್ದೇನೆ. ನಾಗರಹಾವು, ಕೊಳಕ ಮಂಡಲ, ನೀರು ಹಾವು, ಹಸಿರು ಹಾವು ಇತ್ಯಾದಿ 8-10 ಜಾತಿಯ ಹಾವುಗಳನ್ನು ಹಿಡಿದಿದ್ದೇನೆ ಎನ್ನುತ್ತಾರೆ ಚಂದು.
ಹಾವು ಕಂಡರೆ ಸಾಕು ಬರಿ ಕೈಯಿಂದಲೇ ಅದರ ಬಾಲ ಹಿಡಿದು ಅದನ್ನು ಚೀಲಕ್ಕೆ ಹಾಕುತ್ತಾರೆ. ಹಾವು ಬಂದಿದೆ ಎಂದು ಯಾರೇ ಕರೆ ಮಾಡಿದರೂ ಚಂದು ಬಿಡುವು ಮಾಡಿಕೊಂಡು ಸ್ಥಳಕ್ಕೆ ಧಾವಿಸಿ, ಹಾವನ್ನು ಹಿಡಿದು ಹಾವುಗಳನ್ನು ಸಾಯಿಸದೇ ಅವುಗಳಿಗೂ ಬದುಕುವ ಅವಕಾಶ ನೀಡಿ ಎಂದು ಜನರಲ್ಲಿ ತಿಳಿವಳಿಕೆ ನೀಡುತ್ತಾರೆ. ಹೀಗಾಗಿ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ‘ಸ್ನೇಕ್ ಚಂದು’ ಎಂದೇ ಪ್ರಖ್ಯಾತಿ ಹೊಂದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರೇವಣಸಿದ್ಧ ಜಾಡರ್ ತಿಳಿಸುತ್ತಾರೆ.
‘ನಾನು ಯೂಟ್ಯೂಬ್ನಲ್ಲಿ ಹಾವು ಹಿಡಿಯುವುದನ್ನು ಕಲಿತು ಈಗ ಪ್ರವೃತ್ತಿಯಾಗಿ ಮಾಡಿಕೊಂಡಿದ್ದೇನೆ. ಸದ್ಯಕ್ಕೆ ಹಾವು ಹಿಡಿಯಲು ಯಾರಿಂದಲೂ ಒಂದು ರೂಪಾಯಿ ಹಣ ಕೇಳುವುದಿಲ್ಲ. ಬದಲಾಗಿ ಅವರೇ ಖುಷಿಯಿಂದ ಕೊಡುತ್ತಾರೆ. ಮುಂದಿನ ದಿನಗಳಲ್ಲಿ ಹಾವು ಕಡಿತಕ್ಕೆ ಔಷಧ ಕಂಡುಹಿಡಿಯುವ ಬಗ್ಗೆ ಪ್ರಯತ್ನಿಸುತ್ತಿರುವೆ’ ಎಂದು ಹೇಳುತ್ತಾರೆ ಚಂದ್ರಕಾಂತ ವಾಡೆ.