ಬೀದರ್: ಭಾರಿ ಮಳೆ ಸಂದರ್ಭದಲ್ಲಿ ಅವಘಡಗಳು ಸಂಭವಿಸುವುದು ಸರ್ವೇಸಾಮಾನ್ಯ. ಅಂಥದ್ದೇ ಒಂದು ಪ್ರಕರಣ ಬೀದರ್ ಜಿಲ್ಲೆಯಲ್ಲಿ ನಡೆದಿದ್ದು, ತಾಯಿಯ ಜೊತೆಗೆ ಇಬ್ಬರು ಮಕ್ಕಳೂ ನೀರುಪಾಲಾಗಿದ್ದಾರೆ. ಇವರು ಹಳ್ಳ ದಾಟುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಸುನಂದಾ ಸಂಗಪ್ಪಾ ಲದ್ದೆ (42), ಅವರ ಮಗ ಸುಮಿತ್ (12), ಮಗಳು ಐಶ್ವರ್ಯ ಲದ್ದೆ (14) ಸಾವಿಗೀಡಾದವರು. ಇವರು ಹೊಲದಲ್ಲಿ ಕೆಲಸ ಮಾಡಿ ಮನೆಗೆ ಮರಳುವಾಗ ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಭಾರಿ ಬಿರುಗಾಳಿ ಜೊತೆ ಸುರಿದ ಅಕಾಲಿಕ ಮಳೆಯಿಂದ ಇಲ್ಲಿನ ಹೆಡಗಾಪುರ ಹಳ್ಳ ತುಂಬಿ ಹರಿಯುತ್ತಿತ್ತು. ಅದಾಗ್ಯೂ ಮನೆಗೆ ತಲುಪುವ ಭರದಲ್ಲಿ ಅವರು ಈ ಹಳ್ಳ ದಾಟಲು ಮುಂದಾಗಿದ್ದರು. ಸಂಗಪ್ಪ ಅವರು ಮೊದಲು ಹಳ್ಳ ದಾಟಿದ್ದು, ಬಳಿಕ ಹಳ್ಳ ದಾಟಲು ಯತ್ನಿಸಿದ್ದ ಅವರ ಪತ್ನಿ ಮತ್ತು ಇಬ್ಬರು ಮಕ್ಕಳೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಪೊಲೀಸ್ ಅಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.