News Karnataka Kannada
Sunday, April 28 2024
ಬೀದರ್

ಬೀದರ್: ರಂಗೋಲಿಯಲ್ಲಿ ಅರಳಿದ ಭಾರತ ನಕಾಶೆ!

Map of India blooms in rangoli
Photo Credit : News Kannada

ಬೀದರ್: ರಂಗೋಲಿಯಲ್ಲಿ ಅರಳಿದ ಭಾರತ ನಕಾಶೆ, ಅಟ್ಟಾರಿ-ವಾಘಾ ಗಡಿಯಲ್ಲಿ ಯೋಧರ ಕವಾಯತು, ಜಂಬೂ ಸವಾರಿ, ಕನಕದಾಸರ ಕೀರ್ತನೆ, ಸಂವಿಧಾನ, ಅನುಭವ ಮಂಟಪ, ಮಹಮೂದ್ ಗವಾನ್ ಮದರಸಾ ಅವಿನ್ಯಾ-2023 ಶೀರ್ಷಿಕೆಯಡಿ ಇಲ್ಲಿಯ ಮಾಮನಕೇರಿಯ ಜ್ಞಾನಸುಧಾ ವಿದ್ಯಾಲಯದಲ್ಲಿ ಶನಿವಾರ ಶುರುವಾದ ಎರಡು ದಿನಗಳ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ ಆಗಿರುವ ಪ್ರದರ್ಶನ ಹಾಗೂ ಮಾದರಿಗಳು ಇವು.

ಪ್ರದರ್ಶನದಲ್ಲಿ ನರ್ಸರಿಯಿಂದ ದ್ವಿತೀಯ ಪಿಯುಸಿವರೆಗಿನ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಾವೇ ಸಿದ್ಧಪಡಿಸಿರುವ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಳ್ಳು ಹುರಿದಂತೆ ಅವುಗಳ ವಿವರಣೆ ನೀಡುತ್ತಿದ್ದಾರೆ. ಪ್ರದರ್ಶನ ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಅನಾವರಣಕ್ಕೆ ವೇದಿಕೆ ಒದಗಿಸಿಕೊಟ್ಟಿದೆ.

ಭಾರತ ಮತ್ತು ಪಾಕಿಸ್ತಾನ್ ಯೋಧರು ಅಟ್ಟಾರಿ-ವಾಘಾ ಗಡಿಯಲ್ಲಿ ಪ್ರತಿ ದಿನ ರಾಷ್ಟ್ರಧ್ವಜ ಕೆಳಗಿಳಿಸುವ ಮುನ್ನ ನಡೆಸುವ ಕವಾಯತು ಪ್ರದರ್ಶನದ ಬೀಟಿಂಗ್ ರಿಟ್ರಿಟ್ ಪ್ರದರ್ಶನ ಮೈ ನವಿರೇಳಿಸುತ್ತಿದೆ.

ಪ್ರದರ್ಶನ ವೀಕ್ಷಣೆಗೆ ಬರುವವರಿಗೆ ವಿದ್ಯಾರ್ಥಿಗಳು ಕಾಂತಾರ ಚಿತ್ರ, ಕಂಸಾಳೆ, ಲೇಜಿಮ್ ನೃತ್ಯಗಳ ಪ್ರದರ್ಶನ ಮೂಲಕ ಸ್ವಾಗತ ಕೋರುತ್ತಿದ್ದಾರೆ. ಪ್ರವೇಶ ದ್ವಾರವನ್ನು ಮೈಸೂರು ಅರಮನೆ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದು, ಅದರ ಮುಂದೆ ವಿದ್ಯಾರ್ಥಿಯೊಬ್ಬರು ಕುದುರೆ ಮೇಲೆ ಸೈನಿಕನ ವೇಷದಲ್ಲಿ ಕುಳಿತು ಗಮನ ಸೆಳೆಯುತ್ತಿದ್ದಾರೆ. ವಿದ್ಯಾಲಯದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ನಾಡಹಬ್ಬ ಮೈಸೂರಿನ ಜಂಬೂ ಸವಾರಿಯ ಮಾದರಿಯ ಅರ್ಜುನ ಸೊಂಡಿಲು ಬೀಸಿ ಬರಮಾಡಿಕೊಳ್ಳುತ್ತಿದ್ದಾನೆ.

ಪ್ರದರ್ಶನದಲ್ಲಿ ಕನಕದಾಸರ ವೇಷ ಧರಿಸಿ ಕೈಯಲ್ಲಿ ತಂಬೂರಿ ಹಿಡಿದು ಕೀರ್ತನೆ ಹಾಡುತ್ತಿರುವ ವಿದ್ಯಾರ್ಥಿ, ಭಾರತದ ಸಂವಿಧಾನ, ಬಸವಕಲ್ಯಾಣದ ಅನುಭವ ಮಂಟಪ, ಬೀದರ್‍ನ ಮಹಮೂದ್ ಗವಾನ್ ಮದರಸಾ, ಮಹಾತ್ಮ ಗಾಂಧೀಜಿ ಚರಕ, ಸರ್ದಾರ್ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆಗಳು ಪುಳಕಿತಗೊಳಿಸುತ್ತಿವೆ.

ಕೆಂಪೇಗೌಡರ ಪ್ರತಿಮೆ, ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನ, ಸ್ವರ್ಣ ಮಂದಿರ, ವಿಜಯಪುರದ ಗೋಲ ಗುಮ್ಮಟ, ಕಲ್ಯಾಣ ಕರ್ನಾಟಕ ವೈಭವ, ದೇಶದ ಸ್ವಾತಂತ್ರ್ಯದ 75 ವರ್ಷಗಳ ಪಯಣ, ರೋಬೊಟಿಕ್, ಹಳ್ಳಿ ಜೀವನ, ಕರ್ನಾಟಕದ ಜಲಪಾತಗಳು, ಕವಿಗಳ ಜೀವನ, ಸೌರಮಂಡಲ. ವಕ್ರೀಭವನ, ಸೌರಶಕ್ತಿ, ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ್ತಿಯರು ಮೊದಲಾದ ಮಾದರಿಗಳು ಪ್ರದರ್ಶನದಲ್ಲಿ ಇವೆ.

ವಿದ್ಯಾರ್ಥಿಗಳ ನೃತ್ಯ, ಜುಗುಲ್ ಬಂದಿ ಗಾಯನ, ಕಿರುನಾಟಕ, ಬಾಲ್ಯ ವಿವಾಹ, ವೃಕ್ಷಸಾಕ್ಷಿ, ಮೊಬೈಲ್ ಚಟ ಕಿರು ನಾಟಕಗಳು ಸಾಂಸ್ಕøತಿಕ ಸಂಭ್ರಮವನ್ನು ಸಂಭ್ರಮವನ್ನು ಸೃಷ್ಟಿಸಿವೆ.

ಜಿಲ್ಲಾಧಿಕಾರಿ ಉದ್ಘಾಟನೆ: ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಚಾಲನೆ ನೀಡಿದರು. ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ, ನಿರ್ದೇಶಕ ಮುನೇಶ್ವರ ಲಾಖಾ, ಸಪ್ನಾ ಗ್ರುಪ್ಸ್‍ನ ಮಾಲೀಕ ಚಂದ್ರಶೇಖರ ಪಾಟೀಲ, ಸಿವಿಲ್ ಎಂಜಿನಿಯರ್ ರವಿ ಮೂಲಗೆ, ಸಂಸ್ಥೆಯ ಉಪಾಧ್ಯಕ್ಷೆ ಸುಧಾ ರೇವಣಸಿದ್ದಯ್ಯ, ಕಾರ್ಯದರ್ಶಿ ನಿರ್ಮಲಾ ವೀರಶೆಟ್ಟಿ, ಜಂಟಿ ಕಾರ್ಯದರ್ಶಿ ವಿದ್ಯಾವತಿ ಬಾವಗೆ, ಖಜಾಂಚಿ ಸಂಗೀತಾ ಮುನೇಶ್ವರ ಲಾಖಾ, ಸದಸ್ಯೆಯರಾದ ಮಂಜುಳಾ ಮೂಲಗೆ, ಸುಜಾತ ಶಿವಶಂಕರ, ನಂದಿನಿ ಚಂದ್ರಶೇಖರ ಪಾಟೀಲ, ನಾಗ ಸುಧಾರೆಡ್ಡಿ, ಶಿವಾನಿ ವೆಂಕಟ ರೆಡ್ಡಿ, ಶ್ರುತಿ ಶಂಕರರಾವ್ ಕೊಟರಕಿ, ಅಶ್ವಿನಿ ಸತೀಶ ರಾಚಣ್ಣ, ಸೋನಿ ಪಾಟೀಲ ಇದ್ದರು. ಪ್ರದರ್ಶನ ಭಾನುವಾರವೂ ಇರಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು