ಬೀದರ್: ಕಾಂಗ್ರೆಸ್ ಮುಖಂಡನೋರ್ವ ಗಾಳಿಯಲ್ಲಿ ಗುಂಡು ಹಾರಿಸಿ 3.5 ಕೋಟಿ ರೂಪಾಯಿ ದರೋಡೆ ಮಾಡಿರುವ ಘಟನೆ ಬೀದರ್ನಲ್ಲಿ ನಡೆದಿದೆ. ಬುಧವಾರ (ನವೆಂಬರ್ 29) ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-65ರ ಹಣಮಂತವಾಡಿ ಬಳಿ ಈ ದರೋಡೆ ನಡೆದಿದ್ದು, ಸದ್ಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಗುಂಡು ರೆಡ್ಡಿ ವಿರುದ್ಧ ದರೋಡೆ ನಡೆಸಿರೋ ಆರೋಪ ಕೇಳಿ ಬಂದಿದೆ. ಪೊಲೀಸರು ಗುಂಡು ರೆಡ್ಡಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆಂಧ್ರ ಪ್ರದೇಶ ಮೂಲದ ಉದ್ಯಮಿ ಉಮಾಪತಿ ಎಂಬವರು ತಿರುಪತಿಯಿಂದ ಮಹಾರಾಷ್ಟ್ರದ ಪಂಡರಾಪುರಕ್ಕೆ ತೆರಳುತ್ತಿದ್ದರು. ರೈತರೊಬ್ಬರಿಗೆ ಹಣ ನೀಡಲು 3.5 ಕೋಟಿ ರೂಪಾಯಿ ನಗದು ಜೊತೆ ಉಮಾಪತಿ ಪ್ರಯಾಣ ಬೆಳೆಸಿದ್ದರು.
ಹಣೆ ಮೇಲೆ ಗನ್ ಇರಿಸಿ ದರೋಡೆ:
ಈ ವೇಳೆ ಮಾರ್ಗ ಮಧ್ಯೆ ಪನ್ನೀರ್ ಫ್ಯಾಕ್ಟರಿ ಬಳಿ ಫ್ರೆಶ್ ಆಗಲು ಕಾರ್ ನಿಲ್ಲಿಸಿದ್ದರು. ಅಲ್ಲಿಗೆ ಬೈಕ್ ನಲ್ಲಿ ಬಂದ ನಾಲ್ವರು ಹಣೆ ಮೇಲೆ ಗನ್ ಇಟ್ಟು 3.5 ಕೋಟಿ ರೂಪಾಯಿ ದರೋಡೆ ಮಾಡಿದ್ದಾರೆ. ಈ ವೇಳೆ ಗಾಳಿಯಲ್ಲಿ ಗುಂಡು ಸಹ ಹಾರಿಸಲಾಗಿತ್ತು ಎಂದು ವರದಿಯಾಗಿದೆ.
24 ಗಂಟೆಯಲ್ಲಿ ಪೊಲೀಸರ ಬಲೆಯಲ್ಲಿ ಆರೋಪಿಗಳು:
ದರೋಡೆಕೋರರು ಅಲ್ಲಿಂದ ತೆರಳುತ್ತಿದ್ದಂತೆ ಉಮಾಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು 24 ಗಂಟೆಯಲ್ಲಿಯೇ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಗುಂಡು ರೆಡ್ಡಿ, ಸಂಜಯ್ ರೆಡ್ಡಿ, ವಿಜಯ್ ಕುಮಾರ್ ರೆಡ್ಡಿ ಸೇರಿದಂತೆ ನಾಲ್ವರು ಪೊಲೀಸರ ಅತಿಥಿಗಳಾಗಿದ್ದಾರೆ. ಓರ್ವ ಎಸ್ಕೇಪ್ ಆಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
2.62 ಕೋಟಿ ವಶಕ್ಕೆ:
ಪೊಲೀಸರು ಬಂಧಿತರಿಂದ 2.62 ಕೋಟಿ ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ. ಸುಲಿಗೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಆಕ್ಟ್ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಖಲೆ ಇಲ್ಲದ 8 ಕೋಟಿ ಹಣ ವಶಕ್ಕೆ:
ಚಿತ್ರದುರ್ಗದ ಹೊಳಲ್ಕೆರೆ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಕೋಟಿ ಹಣ ಜಪ್ತಿ ಮಾಡಲಾಗಿದೆ. ಮಲ್ಲಾಡಿಹಳ್ಳಿ ಬಳಿ ಪೊಲೀಸರು ಇನೋವಾ ಕಾರ್ ಅನ್ನು ತಡೆದು ಅದರಲ್ಲಿದ್ದ 8 ಕೋಟಿ ಹಣವನ್ನ ಜಪ್ತಿ ಮಾಡಿದ್ದಾರೆ.
ಈ ಹಣ ಅಡಿಕೆ ವರ್ತಕ ಉದಯ ಶೆಟ್ಟಿ ಅನ್ನೋರಿಗೆ ಸೇರಿದ್ದು ಎನ್ನಲಾಗಿದೆ. ಸದ್ಯ ಪೊಲೀಸ್ರು ಕಾರ್ ವಶಕ್ಕೆ ಪಡೆದು ಪರಿಶೀಲನೆ ಮಾಡ್ತಿದ್ದಾರೆ.