ಬೀದರ್: ತಾಲ್ಲೂಕಿನ ಜನವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 34 ಮಕ್ಕಳಷ್ಟೇ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳನ್ನು ಕಲಿಸಲು ಐದು ಜನ ಶಿಕ್ಷಕರಿದ್ದಾರೆ!
ಶಾಲೆಯಲ್ಲಿ ಒಂದರಿಂದ ಎಂಟರವರೆಗೆ ತರಗತಿಗಳಿವೆ. ವಿಶೇಷವೆಂದರೆ ಯಾವ ತರಗತಿಯಲ್ಲೂ ಹತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಲ್ಲ. ಮೂರನೇ ಹಾಗೂ ಆರನೇ ತರಗತಿಯಲ್ಲಿ ಗರಿಷ್ಠ ತಲಾ ಏಳು ಜನ ವಿದ್ಯಾರ್ಥಿಗಳಿದ್ದಾರೆ.
ಒಂದನೇ ತರಗತಿಯಲ್ಲಿ 3, ಎರಡನೇ ತರಗತಿಯಲ್ಲಿ 5, ಮೂರನೇ ತರಗತಿಯಲ್ಲಿ 7, ನಾಲ್ಕನೇ ತರಗತಿಯಲ್ಲಿ 4, ಐದನೇ ತರಗತಿಯಲ್ಲಿ 2, ಆರನೇ ತರಗತಿಯಲ್ಲಿ 7, ಏಳನೇ ತರಗತಿಯಲ್ಲಿ 3, ಎಂಟನೇ ತರಗತಿಯಲ್ಲಿ ಮೂವರು ಮಕ್ಕಳಿದ್ದಾರೆ.
ಶಾಲೆಯ ಗೋಡೆಗಳೆಲ್ಲ ಬಹುತೇಕ ಕುಸಿದಿವೆ. ಹಲವು ಕಡೆಗಳಲ್ಲಿ ತೇಪೆ ಹಚ್ಚಲಾಗಿದೆ. ಮಳೆಗಾಲದಲ್ಲಿ ಛಾವಣಿಯಿಂದ ನೀರು ಜಿನುಗುತ್ತದೆ. ಕೆಲ ತರಗತಿಗಳ ಕಿಟಕಿ, ಬಾಗಿಲುಗಳು ಹಾಳಾಗಿವೆ. ಶುದ್ಧ ಕುಡಿವ ನೀರಿಗೂ ಬರ ಇದೆ. ತರಗತಿಯೊಂದರಲ್ಲೇ ನೀರಿನ ಟ್ಯಾಂಕರ್ ಇಡಲಾಗಿದೆ. ಅದಕ್ಕೆ ಕೊಳಾಯಿ ಜೋಡಿಸಲಾಗಿದ್ದು, ಮಕ್ಕಳೆಲ್ಲ ಅದೇ ನೀರು ಉಪಯೋಗಿಸುತ್ತಾರೆ. ಕೊಠಡಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಇನ್ನು, ಸೂಕ್ತ ಆಟದ ಮೈದಾನವೂ ಇಲ್ಲ. ಹೀಗೆ ಇಲ್ಲಗಳ ನಡುವೆ ಮಕ್ಕಳು ಕಲಿಯುತ್ತಿದ್ದಾರೆ.
‘ದಶಕದ ಹಿಂದೆ ಈ ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದರು. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಶಾಲೆ ಮರಾಠಿ ಮಾಧ್ಯಮ ಆಗಿರುವುದರಿಂದ ಕಾಳಜಿ ವಹಿಸುತ್ತಿಲ್ಲ. ನಮ್ಮ ಶಾಲೆಯ ಸಮೀಪದಲ್ಲೇ ಕನ್ನಡ, ಇಂಗ್ಲಿಷ್ ಶಾಲೆಗಳಿವೆ. ಹೆಚ್ಚಿನವರು ಇಂಗ್ಲಿಷ್ ಶಾಲೆಗಳಿಗೆ ಅವರ ಮಕ್ಕಳನ್ನು . ಹೆಚ್ಚಿನವರು ಇಂಗ್ಲಿಷ್ ಶಾಲೆಗಳಿಗೆ ಅವರ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇಂಗ್ಲಿಷ್ ಶಾಲೆ ಆರಂಭಿಸಿದ ನಂತರ ಮರಾಠಿಯಷ್ಟೇ ಅಲ್ಲ, ಕನ್ನಡ ಓದುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದೆ’ ಎಂದು ಶಾಲೆಯ ಪ್ರಭಾರ ಪ್ರಾಂಶುಪಾಲೆ ಉಜ್ವಲಾ ತಿಳಿಸಿದರು.
‘ನನಗೆ ಗೊತ್ತಿರುವಂತೆ ಬೀದರ್ ತಾಲ್ಲೂಕಿನಲ್ಲಿ ಬೀದರ್ನ ಶಹಾಗಂಜ, ಬೆನಕನಳ್ಳಿ ಹಾಗೂ ಜನವಾಡದಲ್ಲಿ ಮಾತ್ರ ಮರಾಠಿ ಮಾಧ್ಯಮದ ಶಾಲೆಗಳಿವೆ. ಅನೇಕರಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕೆಂಬ ಹಂಬಲ ಇದೆ. ಸೂಕ್ತ ಸೌಕರ್ಯ ಕಲ್ಪಿಸದ ಕಾರಣ ಪೋಷಕರು ಮಕ್ಕಳನ್ನು ಕಲಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳಿದರು.
‘ಮರಾಠಿ ಮಾಧ್ಯಮ ಶಾಲೆ ಎಂಬ ಕಾರಣಕ್ಕಾಗಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಯಾರು, ಯಾವುದೇ ಭಾಷೆಯಲ್ಲಿ ಶಿಕ್ಷಣ ಪಡೆಯಬಹುದು. ಅದರಿಂದ ವಂಚಿತರಾಗಿ ಮಾಡಬಾರದು. ಅನ್ಯ ಶಾಲೆಗಳಂತೆ ಉತ್ತಮ ಸೌಕರ್ಯ ಒದಗಿಸಿದರೆ ಮಕ್ಕಳ ಸಂಖ್ಯೆ ತಾನಾಗಿಯೇ ಹೆಚ್ಚಾಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಮರಾಠ ಸಮಾಜದ ಮುಖಂಡರೊಬ್ಬರು ಹೇಳಿದರು.