ಬೀದರ್: ‘ಪೊಲೀಸ್ ಠಾಣೆಯನ್ನು ಮಕ್ಕಳ ಸ್ನೇಹಿಯಾಗಿ ರೂಪಿಸಿರುವ ಅಧಿಕಾರಿಗಳ ಕ್ರಮ ಶ್ಲಾಘನೀಯ. ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸಲಾಗುತ್ತಿದೆ. ಲೋಕಸಭೆ ಚುನಾವಣೆ ಶಾಂತಿಯುತವಾಗಿ ನಡೆಯುವಂತಾಗಲು ಸರ್ವ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್.ಹೇಳಿದರು.
ನಗರ ಠಾಣೆಯಲ್ಲಿ ಗುರುವಾರ ಏರ್ಪಡಿಸಿದ್ದ ಮಕ್ಕಳ ಸಹಾಯವಾಣಿ ಮತ್ತು ಆರೈಕೆ ಕೇಂದ್ರ ಉದ್ಘಾಟನೆ ಕಾರ್ಯದಲ್ಲಿ ಮಕ್ಕಳ ಆರೈಕೆ ಕೇಂದ್ರವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಡಿವೈಎಸ್ಪಿ ಜಿ.ಎಸ್. ನ್ಯಾಮಗೌಡ, ಸಿಪಿಐ ಅಲಿಸಾಬ್, ಎಸ್ಐಗಳಾದ ಅಂಬರೀಶ ವಾಘಮೋಡೆ, ನಾಗೇಂದ್ರ ಉಪಸ್ಥಿತರಿದ್ದರು.
ವ್ಯವಸ್ಥೆ: ಠಾಣೆಯ ಒಳ ಕೊಠಡಿಯೊಂದರಲ್ಲಿ ಮಕ್ಕಳ ಆರೈಕೆ ಮತ್ತು ಸುರಕ್ಷತೆ ಒದಗಿಸುವುದಕ್ಕಾಗಿ ಕೇಂದ್ರ ರೂಪಿಸಿ, ವಿವಿಧ ಆಟಿಕೆ ಸಾಮಾನುಗಳನ್ನು ಇಡಲಾಗಿದೆ. ಬಿಸ್ಕತ್ತು, ಚಾಕೊಲೇಟ್ಗಳನ್ನು ಸಹ ಇಲ್ಲಿ ಇಡಲಾಗಿದೆ. ಗೋಡೆ ಮೇಲೆ ವಿವಿಧ ಪ್ರಾಣಿ ಪಕ್ಷಿಗಳ ಚಿತ್ರ ಬಿಡಿಸಲಾಗಿದೆ. ಇಂಗ್ಲಿಷ್ ಮೂಲಾಕ್ಷರ, ಅಂಕಿ ಸಂಖ್ಯೆಗಳನ್ನು ಬರೆಯಲಾಗಿದೆ. ದೂರು ನೀಡುವುದಕ್ಕೆ ಠಾಣೆಗೆ ಬರುವ ಪೊಷಕರ ಜತೆಯಲ್ಲಿನ ಮಕ್ಕಳ ಮತ್ತು ನಾಪತ್ತೆಯಾಗಿ ಪೊಲೀಸರ ಸುಪರ್ದಿಗೆ ನೀಡಲಾಗುವ ಮಕ್ಕಳನ್ನು ಇಲ್ಲಿ ಆರೈಕೆ ಮಾಡಲಾಗುತ್ತದೆ.