ಬೀದರ್: ಜಿಲ್ಲೆಯ 14 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ 28 ಪ್ರಕರಣಗಳನ್ನು ಭೇದಿಸಿರುವ ಬೀದರ್ ಜಿಲ್ಲಾ ಪೊಲೀಸರು 28 ಆರೋಪಿಗಳನ್ನು ಬಂಧಿಸಿ, ಅವರಿಂದ ₹54.96 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿಕೊಂಡಿದ್ದಾರೆ.
ಬೀದರ್ ಉಪವಿಭಾಗದಲ್ಲಿ 2, ಭಾಲ್ಕಿಯಲ್ಲಿ 8 ಹಾಗೂ ಹುಮನಾಬಾದ್ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ 18 ಪ್ರಕರಣಗಳು ದಾಖಲಾಗಿದ್ದವು.
ಕಳೆದ 15 ದಿನಗಳಲ್ಲಿ 28 ಪ್ರಕರಣಗಳನ್ನು ಭೇದಿಸಿ 28 ಆರೋಪಿಗಳನ್ನು ಬಂಧಿಸಿ, ಅವರಿಂದ ₹54.96 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ. ಎಲ್ಲ ಪ್ರಕರಣ ಭೇದಿಸಿದ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ನಗರದ ಪೊಲೀಸ್ ಹೆಡ್ ಕ್ವಾರ್ಟರ್ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
₹7.76 ಲಕ್ಷ ನಗದು, ₹24.32 ಲಕ್ಷ ಮೌಲ್ಯದ 396 ಗ್ರಾಂ ಬಂಗಾರ, 320 ಗ್ರಾಂ ಬೆಳ್ಳಿ ಆಭರಣಗಳು, ₹3.52 ಲಕ್ಷ ಮೌಲ್ಯದ ಏಳು ಜಾನುವಾರು, ಎರಡು ಸೋಯಾ ಚೀಲ, 355 ಕೆ.ಜಿ ವಿದ್ಯುತ್ ತಂತಿ, ₹19.36 ಲಕ್ಷ ಬೆಲೆಬಾಳುವ ಒಂದು ಆಟೊ, ಮೂರು ನಾಲ್ಕು ಚಕ್ರದ ವಾಹನ, ಎಂಟು ಬೈಕ್, ಆರು ಪಂಪ್ಸೆಟ್, ಮದ್ಯ ಸೇರಿದೆ ಎಂದು ವಿವರಿಸಿದರು.
ಒಂದು ಮನೆ ಕಳ್ಳತನ ಪ್ರಕರಣದಲ್ಲಿ ಹೈದರಾಬಾದಿನ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆತ ₹4 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದ ಎಂದು ತಿಳಿಸಿದರು.
ಐವರ ಗಡಿಪಾರು: ಘೋರ ಅಪರಾಧ ಕೃತ್ಯಗಳಲ್ಲಿ ಶಾಮಿಲಾಗಿದ್ದ ಐವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಜರುಗಿಸಲಾಗಿದ್ದು, ಒಂದು ವರ್ಷದ ಅವಧಿಗೆ ಗಡಿಪಾರು ಮಾಡಲಾಗಿದೆ. ಐವರ ಪೈಕಿ ಒಬ್ಬನ ವಿರುದ್ಧ ಶಾಂತಿ, ಸೌಹಾರ್ದತೆಗೆ ಧಕ್ಕೆ, ಕಳ್ಳತನ, ಮಾರಣಾಂತಿಕ ಹಲ್ಲೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಒಟ್ಟು 20 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದರೂ ಸುಧಾರಿಸಿಕೊಂಡಿಲ್ಲ ಎಂದು ಎಸ್ಪಿ ಚನ್ನಬಸವಣ್ಣ ಮಾಹಿತಿ ನೀಡಿದರು.
ಓಲ್ಡ್ ಸಿಟಿಯಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ: ರಂಜಾನ್ ಪವಿತ್ರ ಮಾಸ ಆರಂಭವಾಗಿದ್ದು, ನಗರದ ಓಲ್ಡ್ ಸಿಟಿಯಲ್ಲಿ ಪ್ರಾರ್ಥನೆ ಸೇರಿದಂತೆ ಇತರೆ ಕಾರ್ಯಕ್ಕೆ ಹೆಚ್ಚಿನ ಜನ ಸೇರುತ್ತಾರೆ ಎಂಬುದು ಗಮನಕ್ಕೆ ಬಂದಿದೆ. ಇತ್ತೀಚೆಗೆ ಶಾಂತಿ ಸಭೆ ಕೂಡ ನಡೆಸಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಸಂಚಾರ ವ್ಯವಸ್ಥೆ ಸುಗಮವಾಗಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.