ಬೀದರ್: ಭಾಲ್ಕಿ ವಿಶ್ವಕ್ಕೆ ಸಮಾನತೆ ಸಾರಿದ ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಘೋಷಿಸಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಒತ್ತಾಯಿಸಿದ್ದಾರೆ.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬಸವಣ್ಣನವರು ಜಗತ್ತಿನ ಮಹಾನ್ ದಾರ್ಶನಿಕರ ಪರಂಪರೆಯಲ್ಲಿ ಅಗ್ರಗಣ್ಯರು. 12ನೇ ಶತಮಾನದಲ್ಲಿ ಅವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಮೊಟ್ಟ ಮೊದಲನೆಯ ಪ್ರಜಾಸಂಸತ್ತು ಆಗಿದೆ. ಅನುಭವ ಮಂಟಪದಲ್ಲಿ 770 ಶರಣ ಶರಣೆಯರನ್ನು ಒಗ್ಗೂಡಿಸಿ ಅವರು ಮಾಡಿರುವ ಕ್ರಾಂತಿ ಸಕಲ ಜೀವಾತ್ಮರ ಕಲ್ಯಾಣದ ಸಮಗ್ರ ಕ್ರಾಂತಿ ಆಗಿತ್ತು. ಆ ಕಾರಣಕ್ಕಾಗಿಯೇ ಜಗತ್ತಿನ ವಿವಿಧ ದೇಶಗಳಲ್ಲಿ ಬಸವಣ್ಣನವರ ಪ್ರತಿಮೆಗಳು ನಿರ್ಮಾಣವಾಗುತ್ತಿವೆ. ಜತೆಗೆ ಅವರ ಚಿಂತನೆಗಳ ಅಧ್ಯಯನ ನಡೆಯುತ್ತಿದೆ. ಅದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ ಲಂಡನ್ ಥೇಮ್ಸ್ ನದಿಯ ದಡದಲ್ಲಿ ನಿರ್ಮಾಣಗೊಂಡಿರುವ ಬಸವಣ್ಣನವರ ಪ್ರತಿಮೆ. ಜಗತ್ತಿನ ಶ್ರೇಷ್ಠ ದಾರ್ಶನಿಕರಾದ ಬಸವಣ್ಣನವರು ನಮ್ಮ ನಾಡಿನಲ್ಲಿ ಜನಿಸಿರುವುದು ನಮ್ಮ ನಾಡಿನ ಪುಣ್ಯ. ಹಾಗಾಗಿ ಬಸವಣ್ಣವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಘೋಷಿಸಬೇಕು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಒತ್ತಾಯಿಸುವುದಾಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.