ಬೀದರ್: ಆಸ್ತಿ ನೋಂದಣಿಗೆ ಲಂಚ ಕೇಳಿದ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಲ್ಲಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆಯಿತು.
ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಸಚಿವರು, ಕಚೇರಿಯಲ್ಲಿ ಲಂಚವೇನಾದರೂ ಪಡೆಯಲಾಗುತ್ತಿದೆಯಾ? ಎಂದು ಆಸ್ತಿ ನೋಂದಣಿಗೆ ಬಂದವರನ್ನು ವಿಚಾರಿಸಿದರು. ವ್ಯಕ್ತಿಯೊಬ್ಬರಿಗೆ ನಿಮ್ಮ ಕೆಲಸಕ್ಕೆ ಎಷ್ಟು ಹಣ ಕೊಟ್ಟಿದ್ದೀರಿ. ಗಾಬರಿ ಪಡಬೇಡಿ, ಇದ್ದದ್ದು ಹೇಳಿ ಎಂದು ಕೇಳಿದರು.
ಆಸ್ತಿ ನೋಂದಣಿಗೆ ರೂ. 35.04 ಲಕ್ಷ ಸ್ಟ್ಯಾಂಪ್ ಡ್ಯೂಟಿ ಇದೆ. ಅಷ್ಟನ್ನು ಮಾತ್ರ ನಾವು ಕಟ್ಟಬೇಕು. ಆದರೆ, ಇವರು ರೂ. 48 ಲಕ್ಷ ಕಟ್ಟುವಂತೆ ಹೇಳುತ್ತಿದ್ದಾರೆ. ರೂ. 50 ಸಾವಿರ ಲಂಚ ಕೇಳಿದ್ದಾರೆ ಎಂದು ವ್ಯಕ್ತಿ ಉಪ ನೋಂದಣಾಧಿಕಾರಿ ಸುಭಾಷ್ ಹೊಸಳ್ಳಿ ಎದುರೇ ದೂರಿದರು.
ದುಡ್ಡು ಕೊಟ್ಟರೆ ಸ್ಟ್ಯಾಂಪ್ ಡ್ಯೂಟಿ ಕಡಿಮೆ ಆಗುತ್ತದೆಯಾ ಎಂದು ಸಚಿವರು ಕೇಳಿದಾಗ, ವ್ಯಕ್ತಿ ಹೌದು ಎಂದು ಉತ್ತರಿಸಿದರು. ಈ ಬಗ್ಗೆ ತನಿಖೆ ನಡೆಸುವಂತೆ ಖಂಡ್ರೆ ಅವರು ಸ್ಥಳದಲ್ಲಿದ್ದ ಜಿಲ್ಲಾ ಆಡಳಿತದ ಅಧಿಕಾರಿಗಳಿಗೆ ಸೂಚಿಸಿದರು.
ದೂರುಗಳು ಬಂದ ಕಾರಣಕ್ಕಾಗಿಯೇ ಕಚೇರಿಗೆ ಭೇಟಿ ಕೊಟ್ಟಿದ್ದೇನೆ. ನಿಮ್ಮದು ಅತಿಯಾಯಿತು. ಸುಧಾರಿಸಿಕೊಳ್ಳಿ ಎಂದು ಉಪ ನೋಂದಣಾಧಿಕಾರಿಗೆ ಎಚ್ಚರಿಕೆ ನೀಡಿದರು.
ಉಪ ನೋಂದಣಾಧಿಕಾರಿ ಕೋಣೆಯಲ್ಲಿ ಸಾರ್ವಜನಿಕರಿಗೆ ಒಂದೂ ಕುರ್ಚಿ ಹಾಕದಿದ್ದಕ್ಕೂ ಸಚಿವರು ತೀವ್ರ ಅಸಮಾಧಾನ ಹೊರ ಹಾಕಿದರು. ನೀವೊಬ್ಬರೇ ಆರಾಮಾಗಿ ಕೂರುತ್ತೀರಾ?, ವಯಸ್ಸಾದವರು, ನೋಂದಣಿಗೆ ಬರುವವರನ್ನು ಎಲ್ಲಿ ಕೂರಿಸುತ್ತೀರಿ, ಒಂದಿಷ್ಟು ಕುರ್ಚಿಗಳನ್ನು ಹಾಕಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಯಾರಿಗೂ ಒಳಗೆ ಬರುವ ಅವಶ್ಯಕತೆಯೇ ಇರುವುದಿಲ್ಲ ಎಂದು ಅಧಿಕಾರಿ ಸಮಜಾಯಿಸಿ ನೀಡಲು ಮುಂದಾದಾಗ, ನಾನು ಬಂದಾಗ ಕೋಣೆಯಲ್ಲಿ ಆರು ಜನ ಇದ್ದರು. ಅವರು ಯಾಕೆ ಬಂದಿದ್ದರು ಎಂದು ಮರು ಪ್ರಶ್ನೆ ಹಾಕಿದರು. ಲೂಟಿ ನಡೆಯಲ್ಲ ಎಂದು ಕಡಕ್ ಎಚ್ಚರಿಕೆಯನ್ನೂ ನೀಡಿದರು.