ಬೀದರ್: ಪ್ರತಿ ವರ್ಷ ರಾಜ್ಯಾದ್ಯಂತ 5 ಕೋಟಿ ಸಸಿ ನೆಡುವ ಗುರಿ ಹೊಂದಿರುವ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರ ಯೋಜನೆಗೆ ಸಾಥ್ ನೀಡಿರುವ ಬಸವಕಲ್ಯಾಣದ ಕರ್ನಾಟಕ ರೂರಲ್ & ಅರ್ಬನ್ ಡೆವಲಪ್ಮೆಂಟ್ ಸಂಸ್ಥೆ ತಾಲೂಕಿನ 15 ಪಂಚಾಯತಿಗೆ 100 ಸಸಿಗಳನ್ನ ನೀಡಿ, ಅವುಗಳ ಪಾಲನೆ ಪೋಷಣೆಗೆ ಮುಂದಾಗಿದೆ.
ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿ ಪ್ರಾಥಮಿಕವಾಗಿ ನಾರಾಯಣಪುರ ಪಂಚಾಯತಿಗೆ 100 ಗಿಡಗಳನ್ನ ನೀಡಿದರು. ಬಳಿಕ ಶಾಲೆಯ ಮಕ್ಕಳಿಗೂ ಸಸಿಗಳನ್ನ ನೀಡಿ ಪರಿಸರ ಬೆಳೆಸುವ ಮಾಹಿತಿ ನೀಡಿದರು.
ಈ ಕುರಿತು ಸಂಸ್ಥೆಯ ಮುಖ್ಯಸ್ಥ ಕರಬಸಯ್ಯ ಮಠಪತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪರಿಸರದ ನಾಶ ಹೆಚ್ಚಾಗಿದ್ದು, ಪರಿಸರ ಬೆಳೆಸುವುದು ಅವಶ್ಯಕವಾಗಿದೆ. ಜಿಲ್ಲೆಯವರೆ ಆದ ಸಚಿವ ಈಶ್ವರ ಖಂಡ್ರೆ ಅವರ ಸಸಿ ಬೆಳೆಸುವ ಯೋಜನೆ ಉತ್ತಮವಾಗಿದೆ. ಹಾಗಾಗಿ ನಾವು ಕೂಡ ಅವರ ಯೋಜನೆಗೆ ಸಾಥ್ ನೀಡಿದ್ದು, ಪ್ರತಿ ಪಂಚಾಯತಿಗಳಿಗೆ ನೂರು ಸಸಿಗಳನ್ನ ನೀಡಿ, ಅವುಗಳ ನೆಡುವ ಮೂಲಕ ಅವುಗಳ ಪಾಲನೇ ಪೋಷಣೆಯನ್ನ ಮಾಡ್ತೆವೆ ಎಂದರು.