ಬಳ್ಳಾರಿ : ಮಾಜಿ ಸಚಿವ ಬಳ್ಳಾರಿಯ ಗಣಿಧಣಿ, ಸಚಿವ ಶ್ರೀರಾಮುಲು ಆಪ್ತ ಜನಾರ್ದನ ರೆಡ್ಡಿ ಮತ್ತೊಮ್ಮೆ ಸಕ್ರಿಯ ರಾಜಕೀಯಕ್ಕೆ ಬರಲು ವೇದಿಕೆ ಸಜ್ಜಾಗುತ್ತಿದೆಯಾ, 2023ರ ವಿಧಾನಸಭೆ ಚುನಾವಣೆಗೆ ಮುನ್ನ ಅವರು ಸಕ್ರಿಯ ರಾಜಕೀಯಕ್ಕೆ ಬರುತ್ತಾರೆಯೇ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಈ ಕುರಿತು ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ.
ಬಳ್ಳಾರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀರಾಮುಲು, ಸಕ್ರಿಯ ರಾಜಕಾರಣಕ್ಕೆ ಬರುವಂತೆ ನನ್ನ ಮಿತ್ರ ಶ್ರೀರಾಮುಲು ಅವರು ಸಾಕಷ್ಟು ಕೇಳಿಕೊಳ್ಳುತ್ತಿದ್ದಾರೆ. ಬಳ್ಳಾರಿಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ವೇಗವಾಗಿ ಆಗುತ್ತಿಲ್ಲ ಎಂಬ ಬೇಸರ ಅವರಿಗಿದೆ, ಅದನ್ನು ನನ್ನಲ್ಲಿ ಹೇಳಿಕೊಂಡಿದ್ದಾರೆ. ಆಗ ನಾನು ಚಿಂತೆ ಮಾಡಿಕೊಳ್ಳಬೇಡ, ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದ್ದೇನೆ ಎಂದಿದ್ದಾರೆ.
ಬಳ್ಳಾರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಬಳ್ಳಾರಿಗೆ ನಾನು ಕೇವಲ ರಾಜಕೀಯ ಮಾಡಲು ಬಂದಿರುವುದಲ್ಲ, ಬಳ್ಳಾರಿಯನ್ನು ವಿಶ್ವಮಟ್ಟದಲ್ಲಿ ಅಭಿವೃದ್ಧಿಗೊಳಿಸಬೇಕು, ಕ್ರಿಕೆಟ್ ವಿಶ್ವಕಪ್ ನಡೆಯುವ ಮಟ್ಟಕ್ಕೆ ಬಳ್ಳಾರಿಯನ್ನು ಬೆಳೆಸಬೇಕೆಂಬುದು ನನ್ನ ಬಯಕೆಯಾಗಿದೆ ಎಂದರು.
ನನ್ನ ಸೋದರರು ಶಾಸಕರಾಗಿದ್ದಾರೆ, ನಾನು ಕೂಡ ಶಾಸಕನಾದಂತೆ, ಶ್ರೀರಾಮುಲು ಸಚಿವನಾದರೆ ನಾನು ಕೂಡ ಮಂತ್ರಿಯಾದಂತೆ, ನಾನು ಬೇರೆ ಅಲ್ಲ ನನ್ನ ಸೋದರರು-ಶ್ರೀರಾಮುಲು ಬೇರೆ ಅಲ್ಲ ಎಂದರು.
ಹಲವು ಕಡೆ ಸ್ಪರ್ಧಿಸಲು ಒತ್ತಾಯ: ನನಗೆ ಮುಂಬರುವ ಚುನಾವಣೆಯಲ್ಲಿ ಬಳ್ಳಾರಿ, ಗಂಗಾವತಿ, ವಿಜಯಪುರ, ಕೊಪ್ಪಳ, ಕೋಲಾರ ಮತ್ತು ಬೆಂಗಳೂರಿನ ಕೆ ಆರ್ ಪುರಂ ಮತ್ತು ಬಿಟಿಎಂ ಲೇ ಔಟ್ ನಿಂದ ಸ್ಪರ್ಧಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಕೂಡ ಜನಾರ್ದನ ರೆಡ್ಡಿ ಹೇಳಿದ್ದಾರೆ.