ಬೀದರ್: ಎರಡನೇ ಬಾರಿಗೆ ಡಾ. ಚಂದ್ರಶೇಖರ ಪಾಟೀಲ್ ಮೇಲ್ಮನೆ ಪ್ರವೇಶ ಮಾಡಿದ್ದು, ಖರ್ಗೆ ಅಲೆಯಲ್ಲಿ ಕಮಲ ಕಮರಿದ್ದು, ಈಶಾನ್ಯ ಪದವಿಧರ ಕ್ಷೇತ್ರದ ಎಲೆಕ್ಷನ್ ನಲ್ಲೂ ಕೈ ಮೋಡಿ ಮಾಡಿದೆ.
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಪದವಿಧರ ವಿಧಾನ ಪರಿಷತ್ ಚುನಾವಣೆಯಲ್ಲಿ ಡಾ. ಚಂದ್ರಶೇಖರ್ ಪಾಟೀಲ್ ಸೆಕೆಂಡ್ ಇನಿಂಗ್ಸ್ ಆರಂಭವಾಗಿದೆ.
2018 ರಲ್ಲಿ ಮೊದಲ ಬಾರಿ ಡಾ. ಚಂದ್ರಶೇಖರ್ ಪಾಟೀಲ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿ ಭದ್ರಕೋಟೆಯನ್ನು ಭೇದಿಸಿ ದಾಖಲೆ ನಿರ್ಮಿಸಿದರು. ಕಾಂಗ್ರೆಸ್ ಪಾಲಿಗೆ ಅತಿ ಕಠಿಣ ಸವಲಾಗಿದ್ದ ಈ ಚುನಾವಣೆ ಡಾ.ಚಂದ್ರಶೇಖರ್ ಪಾಟೀಲ್ ಜಯಭೇರಿ ಬಾರಿಸುವ ಮೂಲಕ ಪಕ್ಷದ ಮತ್ತು ಕಾರ್ಯಕರ್ತರ ವರ್ಚಸ್ಸು ಹೆಚ್ಚಿಸಿದ್ದಾರೆ.
ಗೆಲುವಿನ ಜೊತೆಗೆ ಪಾಟೀಲ್ ಪರಿವಾರದ ರಾಜಕೀಯ ಶಕ್ತಿ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಡಾ. ಚಂದ್ರಶೇಖರ ಪಾಟೀಲ ಅವರು 4,651 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಲಬುರಗಿ ನಗರದ ಗುಲಬರ್ಗಾ ವಿ.ವಿ.ಯ ಸಾದ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು,
ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಅವರಿಗೆ ಗೆಲುವಿನ ಪ್ರಮಾಣ ಪತ್ರ ವಿತರಿಸುವ ಮೂಲಕ ಅಧಿಕೃತವಾಗಿ ಫಲಿತಾಂಶವನ್ನು ಘೋಷಿಸಿದರು.
ಫಲಿತಾಂಶ ಹೋರ ಬೀಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಪಾಟೀಲ್ ಅಭಿಮಾನಿಗಳು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.