ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಒಂದೇ ಮನೆಯಲ್ಲಿದ್ದ ವಿಚ್ಛೇದಿತ ಮಹಿಳೆ ಬಿಟ್ಟುಹೋಗಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ.18ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡು ಮೂಲದ ಅನ್ಬು ಅರಸನ್ (24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಆತ್ಮಹತ್ಯೆಗೆ ಶರಣಾದ ಅನ್ಬು ಅರಸನ್ ಪರಪ್ಪನ ಅಗ್ರಹಾರ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪತಿಯಿಂದ ವಿಚ್ಛೇದನ ಪಡೆದಿದ್ದ ವಿದ್ಯಾ ಸಹ ಅನ್ಬು ಕಂಪನಿಯ ಪಕ್ಕದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿ ಬಳಿಕ ಆತ್ಮೀಯತೆ ಬೆಳೆದು ಪ್ರೀತಿಸಲು ಆರಂಭಿಸಿದ್ದರು. ಕಳೆದೊಂದು ವರ್ಷದಿಂದ ರಾಯಸಂದ್ರದ ಬಾಡಿಗೆ ಮನೆಯಲ್ಲಿ ಸಹಜೀವನದಲ್ಲಿ ಇದ್ದರು.
ಈ ನಡುವೆ ವಿದ್ಯಾ ತನ್ನ ಸಹೋದ್ಯೋಗಿಗಳ ಜತೆಗೆ ಮಾತನಾಡಿದರೂ ಅನ್ಬು ಸಹಿಸುತ್ತಿರಲಿಲ್ಲ. ಬೇರೆಯವರ ಜತೆಗೆ ಮಾತನಾಡದಂತೆ ಎಚ್ಚರಿಕೆ ನೀಡುತ್ತಿದ್ದ.ಒಂದು ವೇಳೆ ಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡಿದರೆ ಅವರ ಎದುರೇ ಅವಮಾನಿಸುತ್ತಿದ್ದ.
ಈತನ ವರ್ತನೆಯಿಂದ ಬೇಸರಗೊಂಡಿದ್ದ ವಿದ್ಯಾ, ಅನ್ಬುನಿಂದ ದೂರವಾಗಿದ್ದಳು. ಪ್ರೇಯಸಿ ದೂರವಾದ ಹಿನ್ನೆಲೆಯಲ್ಲಿ ಅನ್ಬು ಮನನೊಂದು ಜ.18ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನ ಪೋಷಕರು ನೀಡಿದ ದೂರಿನ ಮೇರೆಗೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮೃತನ ಪ್ರೇಯಸಿ ವಿದ್ಯಾ (24) ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821