ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಓರ್ವ ಗಾಯಗೊಂಡ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಬಳ್ಳಾರಿ ರಸ್ತೆಯ ಬಿಎಸ್ಎಫ್ ಗೇಟ್-2ರ ಮುಂಭಾಗ ನಡೆದಿದೆ.
ಬಿಎಸ್ಎಫ್ ಯೋಧ ಸುಧಾಕರ್(41) ಹಾಗೂ ಕೋಲಾರ ಮೂಲದ ಗಿರೀಶ್ (ಗಣಿ) (32) ಮೃತರು. ಮುರಳಿ ಎಂಬಾತ ಗಾಯಗೊಂಡಿದ್ದಾನೆ. ಗಿರೀಶ್ ಮತ್ತು ಆತನ ಸ್ನೇಹಿತ ಮುರುಳಿ ಬಳ್ಳಾರಿ ರಸ್ತೆಯಲ್ಲಿ ಬಾಗಲೂರು ಕ್ರಾಸ್ ಕಡೆಯಿಂದ ನಗರದ ಕಡೆಗೆ ಬರುತ್ತಿದ್ದರು. ಇದೇ ಸಮಯಕ್ಕೆ ಬಿಎಸ್ಎಫ್ ಯೋಧ ಸುಧಾಕರ್ ಗೇಟ್-2ರ ಮೂಲಕ ಸರ್ವಿಸ್ ರಸ್ತೆಗೆ ಬಂದು ಬಾಗಲೂರು ಕಡೆಗೆ ತೆರಳಲು ದ್ವಿಚಕ್ರ ವಾಹನವನ್ನು ಮುಖ್ಯರಸ್ತೆ ಕಡೆಗೆ ತಿರುಗಿಸಿದ್ದಾರೆ. ಈ ವೇಳೆ ಎರಡೂ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.