ತುಮಕೂರು: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಕ್ರಾಸ್ ನಲ್ಲಿ ಕರ್ತವ್ಯದಲ್ಲಿದ್ದ ಮುಖ್ಯಪೇದೆ ನಾಗರಾಜು ಅವರ ಮೇಲೆ ಆರು ಮಂದಿ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಕ್ಕಿರಾಂಪುರ ಮಾರುಕಟ್ಟೆಯಲ್ಲಿ ಶನಿವಾರದ ಜಾತ್ರೆ ನಡೆಸದಂತೆ ಪೊಲೀಸ್ ಇಲಾಖೆ ಆದೇಶ ನೀಡಿತ್ತು. ಆದರೆ ಎಂದಿನಂತೆ ಕುರಿ ಮತ್ತು ಮೇಕೆ ವ್ಯಾಪಾರಿಗಳು ಅರಸಾಪುರ ಗ್ರಾಮದಿಂದ ಬೈಚಾಪುರ ಕಡೆಗೆ ಬೊಲೆರೋ ವಾಹನದಲ್ಲಿ ಕುರಿ ಮತ್ತು ಮೇಕೆಗಳನ್ನು ತಂದಿದ್ದರು, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವಾಹನವನ್ನು ನಿಲ್ಲಿಸಿ ವಾಪಸ್ ಕಳುಹಿಸಲು ಹೊರಟಾಗ ಇದ್ದಕ್ಕಿದ್ದಂತೆ ಆರು ಮಂದಿ ಆರೋಪಿಗಳು ಪೇದೆ ನಾಗರಾಜು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಚನ್ನಪ್ಪ (54), ನರಸಿಂಹರಾಜು (28), ನವೀನ್ ಕುಮಾರ್ (28), ಲಕ್ಷ್ಮಿಪತಿ (26) ಮತ್ತು ನಾಗೇಶ್ (22) ಬಂಧಿತರು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.