ತುಮಕೂರು: ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕನ ಪರಿಷತ್ತಿನ ತಜ್ಞರ ಸಮಿತಿಯು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಎರಡು ದಿನಗಳ ಭೇಟಿಯನ್ನು ಪೂರ್ಣಗೊಳಿಸಿ ಶುಕ್ರವಾರ ಅಂತಿಮ ವರದಿಯನ್ನು ಸಲ್ಲಿಸಿತು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ-ಬೋಧಕೇತರನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ, ಭುವನೇಶ್ವರದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ನ ವಿಶ್ರಾಂತ ಕುಲಪತಿಡಾ. ಹರೇಕೃಷ್ಣ ಸತ್ಪತಿ, ಉತ್ಕೃಷ್ಟತೆ ಎಂಬುದು ಅಂತಿಮ ನಿಲ್ದಾಣವಲ್ಲ, ಅದೊಂದು ನಿರಂತರ ಪಯಣ ಎಂದರು.
ಕಾಲೇಜನ್ನು ನೋಡಿದಾಗ ನನಗೆ ಠಾಗೋರರ ಶಾಂತಿನಿಕೇತನ ನೆನಪಾಯಿತು.ಅಂತಹ ಪ್ರಶಾಂತ, ಉತ್ಕೃಷ್ಟ ವಾತಾವರಣ ಇಲ್ಲಿದೆ. ವಿದ್ಯಾರ್ಥಿಗಳು ಇಲ್ಲಿ ಸಂತೋಷವಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಆದರೆ ಈ ಪ್ರಗತಿ ನಿರಂತರವಾಗಿರಬೇಕು ಎಂದರು.
ಕಾಲೇಜಿನಲ್ಲಿ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳನ್ನು ಪ್ರಶಂಸಿಸಿದ ಅವರು, ಕಲಾ ಕಾಲೇಜು ನಡೆಸಿಕೊಂಡು ಬಂದಿರುವ ಮಾನವಿಕ, ಕಲಾಸಿರಿ, ಸಂಕಲ್ಪ ಹಾಗೂ ಸಂಸ್ಕೃತಿ ಉತ್ಸವಗಳು ಶ್ರೇಷ್ಠ ಉಪಕ್ರಮಗಳು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಶಿಕ್ಷಣ ನೀತಿ-2020 ಯುವಮನಸ್ಸುಗಳ ಸಮಗ್ರ ವಿಕಾಸದ ಸದುದ್ದೇಶ ಇಟ್ಟುಕೊಂಡಿದೆ. ಭಾರತವು ಆತ್ಮನಿರ್ಭರವಾಗುವಲ್ಲಿ ಇದರ ಪಾತ್ರ ಮಹತ್ವದ್ದು. ಕಲಾ ಕಾಲೇಜು ಈ ಉದ್ದೇಶವನ್ನುಈಡೇರಿಸುವತ್ತ ಮುಂದಡಿ ಇಡಬೇಕು. ಇನ್ನಷ್ಟು ಪಠ್ಯೇತರ ಚಟುಟಿಕೆಗಳಿಗೆ ಅವಕಾಶ ನೀಡಿ ಎಂದು ಸೂಚಿಸಿದರು.
ನ್ಯಾಕ್ ತಂಡದ ಇನ್ನಿಬ್ಬರು ಸದಸ್ಯರಾದ ನಾಗಕೊಯಿಲ್ನ ನೂರುಲ್ ಇಸ್ಲಾಂ ಸೆಂಟರ್ ಫಾರ್ ಹೈಯರ್ಎಜುಕೇಶನ್ನ ಕುಲಸಚಿವಡಾ. ಪಿ. ತಿರುಮಲ್ವಲವನ್ ಕೆ.ಪೋತಿರಾಜ, ಆಂಧ್ರಪ್ರದೇಶದ ಎಎನ್ಆರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಶಂಕರ್ ಸಿರಿಪುರಪು, ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಉಪಪ್ರಾಂಶುಪಾಲ ಪ್ರೊ. ಟಿ. ಎನ್. ಹರಿಪ್ರಸಾದ್, ಐಕ್ಯೂಎಸಿ ಸಂಯೋಜಕ ಡಾ. ಬಿ.ಕೆ.ಸುರೇಶ್ ಉಪಸ್ಥಿತರಿದ್ದರು.