ತುಮಕೂರು: ಮನುಷ್ಯ ಮನುಷ್ಯನ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಜಾನಪದ ಸಾಹಿತ್ಯದ ಸಂದರ್ಭದಲ್ಲಿ ಜನಪದ ನಾಶವಾಗುತ್ತಿರುವ ಮೌಖಿಕ ಸಾಹಿತ್ಯ ಮತ್ತು ಪ್ರದರ್ಶನ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಎನ್. ಆರ್ ಚಂದ್ರೇಗೌಡ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕುಮಾರವ್ಯಾಸ ಅಧ್ಯಯನಪೀಠ ಸೋಮವಾರ ಹಮ್ಮಿಕೊಂಡಿದ್ದ ಜನಪದ ಯಕ್ಷಗಾನದಲ್ಲಿ ‘ರತಿ ಕಲ್ಯಾಣ’ದ ಚಿತ್ರಣ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ ಜನಪದ ಸಾಹಿತ್ಯ ತಿರುಳು ಅರ್ಥ ಭಾವ, ಮೌಲ್ಯ ಎಂದು ನಾಶವಾಗುವುದಿಲ್ಲ. ಜನಪದ ಗೀತೆಗಳು ವಾಸ್ತವದಲ್ಲಿ ಪ್ರಸ್ತುತವಾಗುತ್ತವೆ. ಜನಪದ ಸಾಹಿತ್ಯದ ಪ್ರಕಾರಗಳು, ಜನಪದ ಗೀತೆ, ಲಾವಣಿ ಒಗಟುಗಳು ಮಹಾಕಾವ್ಯ ಸ್ವರೂಪಗೊಂಡಿವೆ ಎಂದರು.
ಜನಪದ ಸಾಹಿತ್ಯಕ್ಕೆ ಗ್ರಂಥರೂಪ ನೀಡಿದವರು ಪಾಶ್ಚಾತ್ಯ ವಿದ್ವಾಂಸರು. ಹಲಗಲಿಯ ಬೇಡರ ಲಾವಣಿ, ಕಿತ್ತೂರು ಚನ್ನಮ್ಮನ ಲಾವಣಗಳನ್ನು ನಾವು ಪರಿಗಣಿಸಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ ಮಾತನಾಡಿ, ಕುಮಾರವ್ಯಾಸನ ಕಾವ್ಯವು ಚಂದ. ಯಕ್ಷಗಾನದಲ್ಲಿ ನೃತ್ಯ ಮತ್ತು ವೇಷಭೂಷಣ ಹಾಡುಗಾರಿಕೆ ಒಂದು ಕಲೆ ಇದು ಎಲ್ಲ ಜಿಲ್ಲೆಗಳಲ್ಲಿ ಪ್ರಸಿದ್ಧಿಯಾಗಿದೆ. ಭರತಮುನಿಯ ನಾಟ್ಯಶಾಸ್ತ್ರದಲ್ಲಿಯೂ ಕೂಡ ಉಲ್ಲೇಖವಿದೆ. ಯಕ್ಷಗಾನ ಬಯಲಾಟದ ಇನ್ನೊಂದು ರೂಪವೇ ತಾಳಮದ್ದಳೆ. ಇಲ್ಲಿ ನಾವು ಹಲವು ರೂಪಗಳನ್ನು ಕಾಣಬಹುದು ಎಂದರು.
ತುಮಕೂರು ವಿವಿ ಸಿಂಡಿಕೇಟ್ ಸದಸ್ಯೆ ಭಾಗ್ಯಲಕ್ಷೀ ಹಿರೇಂದ್ರ ಷಾ ಮಾತನಾಡಿ ಕುಮಾರವ್ಯಾಸನ ಭಾಷೆಯ ಸಾಮರ್ಥ್ಯ ಅದ್ಭುತವಾದುದು. ಅಂದಿನ ಕವಿಗಳಿಗೆ ಭಾಷೆಯ ಬಗ್ಗೆ ಇರುವ ಪಾಂಡಿತ್ಯವನ್ನು ಗಮನಿಸಬಹುದು. ವಿಶೇಷವಾಗಿ ಜನರು ಹೆಚ್ಚಿನ ಗುಂಪುಗಳಲ್ಲಿ ಜನಪದ ಹಾಡುಗಳನ್ನು ಹಾಡುತ್ತ ಇದ್ದಾರೆ. ಜನಪದ ಮೌಖಿಕವಾಗಿ ಇದ್ದಾಗ ಯಾರು ನಾಶ ಮಾಡಲು ಸಾಧ್ಯವಿಲ್ಲ. ಲಿಖಿತ ರೂಪದಲ್ಲಿ ಇದ್ದರೆ ಅದು ನಾಶವಾಗುತ್ತದೆ. ಆದರೆ ಜನಪದ ಹೆಚ್ಚು ಮೌಖಿಕವಾಗಿ ಹೆಚ್ಚು ಪ್ರಚಾರವಾಗಿದೆ ಎಂದರು.
ಡಾ.ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಪ್ರೊ.ಅಣ್ಣಮ್ಮ ಮಾತನಾಡಿ, ಯಕ್ಷಗಾನವನ್ನು ಬಯಲಾಟ ರಂಗಕಲೆ ಮತ್ತು ತಾಳಮದ್ದಲೆಯಾಗಿ ದ್ವಿಮುಖ ಸಂಪ್ರದಾಯದಲ್ಲಿ ಅಧ್ಯಯನ ಮಾಡಬಹುದು. ತನ್ನದೆ ಆದ ಪರಂಪರೆ ಬಣ್ಣ, ವೇಷಗಳ ಸೊಗಸು ನೃತ್ಯ, ಮುಖವರ್ಣಿಕೆ ಇರುವ ಅದ್ಭುತ ಕಲೆ ಎಂದು ಬಣ್ಣಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ. ಪಿ.ಎಂ ಗಂಗಾಧರಯ್ಯ ಇಂದಿನ ಸಂದರ್ಭದಲ್ಲಿ ಆಲೋಚನೆ ಮತ್ತು ಅಧ್ಯಯನಕ್ಕೆ ಉಪಯುಕ್ತವಾಗುವಂತೆ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ ಎಂದರು.
ಸಂಶೋಧನಾರ್ಥಿ ಹನುಮಾನಾಯ್ಕ ಸ್ವಾಗತಿಸಿದರು. ಹೇಮಲತ ವಂದಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಕೋಕಿಲ ಎಂ.ಎಸ್. ನಿರೂಪಿಸಿದರು. ಯಕ್ಷದೀವಿಗೆ ಸಂಸ್ಥೆಯಿಂದ ‘ರತಿಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.