ತುಮಕೂರು: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರು ಪಕ್ಕದ ಮನೆಯ ಕಬೋರ್ಡ್ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಆನೇಕಲ್ ತಾಲೂಕಿನ ನೇರಲೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ತುಮಕೂರಿನ ಸಿರಾ ಮೂಲದ ಪಾರ್ವತಮ್ಮ (80) ಎಂದು ಗುರುತಿಸಲಾಗಿದೆ. ಚಿನ್ನಾಭರಣಕ್ಕಾಗಿ ವೃದ್ಧೆಯನ್ನು ನೆರೆಮನೆಯ ಪಾಯಲ್ ಖಾನ್ ಕೊಲೆಗೈದು ಕೈಕಾಲು ಕಟ್ಟಿ ಮನೆಯ ಕಪಾಟಿನಲ್ಲಿ ಹಾಕಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ವೃದ್ಧೆಯ ಮಗ ರಮೇಶ್, ಅವರ ಪತ್ನಿ ಮತ್ತು ಮೊಮ್ಮಕ್ಕಳು ಕಳೆದ 10 ತಿಂಗಳಿಂದ ನೇರಲೂರು ಗ್ರಾಮದ ಕಟ್ಟಡದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದಾರೆ. ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ಪಾಯಲ್ ಖಾನ್ ಇದ್ದರು. ಇಪ್ಪತ್ತು ದಿನಗಳ ಹಿಂದೆ ಪಾರ್ವತಮ್ಮ ತಮ್ಮ ಮಗ, ಸೊಸೆ, ಮೊಮ್ಮಕ್ಕಳನ್ನು ನೋಡಲು ಇಲ್ಲಿಗೆ ಬಂದಿದ್ದರು.