ತುಮಕೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಧಿಕಾರಿಗಳನ್ನೊಳಗೊಂಡ ಯಾವುದೇ ಸಭೆ ನಡೆಸಿಲ್ಲ. ಈ ನಿಟ್ಟಿನಲ್ಲಿ ರಾಜ್ಯಪಾಲರಿಗಾದರೂ ದೂರು ಕೊಡಲಿ ಇನ್ಯಾರಿಗಾದರು ಕೊಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟರು.
ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಸಿಟಿ ರೌಂಡ್ಸ್ನಲ್ಲಿ ಇದ್ದೆ ನನ್ನನ್ನು ಕರೆದುಕೊಂಡು ಹೋಗಲು ಅಧಿಕಾರಿಗಳು ಬಂದಿದ್ದರು. ಈ ವೇಳೆ ನಾನು ಸುರ್ಜೇವಾಲಾ ಇಬ್ಬರು ಕಾಫಿ ಕುಡಿಯಲು ಕುಳಿತು ಕೊಂಡಿದ್ದೆವು. ಅದನ್ನು ಬಿಟ್ಟರೆ ಯಾವ ಆಫೀಸರ್ಗೂ ಸುರ್ಜೇವಾಲಾಗೂ ಸಂಬಂಧವಿಲ್ಲ. ನಾವುಂಟು ಸುರ್ಜೇವಾಲ ಉಂಟು, ಹೋಟೆಲ್ ಉಂಟು, ಕಾಫಿ ಉಂಟು. ಯಾರು ಮೀಟಿಂಗ್ ಕರೆದಿಲ್ಲ, ಯಾವ ಮೀಟಿಂಗ್ ಮಾಡಿಲ್ಲ ಎಂದರು.
ರಾಜ್ಯಪಾಲರಿಗೆ ಬೇಕಾದ ದೂರು ಕೊಡಲಿ, ಇನ್ಯಾರಿಗೆ ಬೇಕಾದರೂ ದೂರು ಕೊಡಲಿ. ಇಂತಹ ಸಭೆಗಳನ್ನು ಬಿಜೆಪಿಯವರು ಎಷ್ಟು ಮಾಡಿದ್ದಾರೆ ಅನ್ನುವ ಪಟ್ಟಿ ಇದೆ. ಪಾಪ ಜಮೀರ್ ಅಹ್ಮದ್ ಫೋಟೋ ಹಾಕಿಕೊಂಡು ಒಂದು ಸಭೆ ಮಾಡಿದ್ದೀನಿ ಅಂತ ಹೇಳಿಕೊಂಡಿದ್ದು ಹಾಗಾಗಿ ಫೋಟೋ ಲೀಕ್ ಆಗಿದೆ ಎಂದು ಸಮರ್ಥಿಸಿಕೊಂಡರು.