ತುಮಕೂರು: ಕಾಂಗ್ರೆಸ್ ಪಕ್ಷ ೨೦ ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಕುಂಚಿಟಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದೆ ಎಂದು ಜಿಲ್ಲಾ ಕುಂಚಿಟಿಗ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೪೫ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರುವ ಕುಂಚಿಟಿಗ ಸಮುದಾಯಕ್ಕೆ ಮಾಡಿರುವ ಅನ್ಯಾಯವನ್ನು ಸರಿಪಡಿಸದೇ ಹೋದರೆ ಕಾಂಗ್ರೆಸ್ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚಿನ ಜನ. ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಜನರಿದ್ದಾರೆ. ಜಿಲ್ಲೆಯ ಎಂಟು ಕ್ಷೇತ್ರದಲ್ಲಿ ಕುಂಚಿಟಿಗರು ನಿರ್ಣಾಯಕ. ಶಿರಾ, ಮಧುಗಿರಿ, ಚಿಕ್ಕನಾಯಕನಹಳ್ಳಿ, ತುಮಕೂರು, ನಮ್ಮ ಮತಗಳಿಂದ ಶಾಸಕರು ಆಯ್ಕೆಯಾಗಿದ್ದಾರೆ ಎಂದರು.
ಕುಂಚಿಟಿಗ ಒಕ್ಕಲಿಗ ಸಮುದಾಯದ ಮುಕ್ಕಣ್ಣಪ್ಪ, ಮಸಿಯಪ್ಪ, ಮಾಲಿ ಮರಿಯಪ್ಪ ಅವರು ಸೇರಿದಂತೆ ಆರರಿಂದ ಎಂಟು ಜನ ಸಮುದಾಯದ ಶಾಸಕರು ಆಯ್ಕೆಯಾಗುತ್ತಿದ್ದರು. ಆದರೆ ಈಗ ಕುಂಚಿಟಿಗ ಸಮುದಾಯವನ್ನು ವ್ಯವಸ್ಥಿತ ರೀತಿಯಲ್ಲಿ ಮೂಲೆ ಗುಂಪು ಮಾಡುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಕುಂಚಿಟಿಗ ಸಮುದಾಯದ ಏಕೈಕ ಶಾಸಕ ಜಯಚಂದ್ರ ಅವರು ಸಂಪುಟ ಸೇರುವುದು ಖಚಿತ ಎಂದು ಸಮುದಾಯದ ಭಾವಿಸಿತ್ತು, ಕಾಂಗ್ರೆಸ್ ನ ಹಿರಿಯ ಶಾಸಕರಾಗಿರುವ ಇವರಿಗೆ ಉನ್ನತ ಸ್ಥಾನಮಾನ ಕೊಡುತ್ತಾರೆ ಎಂಬ ಭಾವನೆ ಇತ್ತು ಅದನ್ನು ಕಾಂಗ್ರೆಸ್ ಹುಸಿಗೊಳಿಸಿದೆ ಎಂದರು.
ಜಯಚಂದ್ರ ಅವರು ಕಾಂಗ್ರೆಸ್ ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪಕ್ಷ ನಿಷ್ಠೆ ತೋರಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಲ್ಲ. ಕಾರ್ಯವೈಖರಿ , ಸಚಿವರಾಗಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ,ಅವರ ಸೇವೆ ಪರಿಗಣಿಸದೆ, ನಿರೀಕ್ಷೆ ಹುಸಿ ಮಾಡಿದೆ. ಇಡಿ ಸಮಾಜಕ್ಕೆ ಅನ್ಯಾಯ, ದ್ರೋಹ ಮಾಡಿದೆ ಎಂದರು.
ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಜಯಚಂದ್ರ ಅವರ ಕೊಡುಗೆ ನೀಡಿದ್ದಾರೆ. ಕಾವೇರಿ ಪ್ರದೇಶದ ನೀರನ್ನು ಭದ್ರಾ ಸೀಮೆಗೆ ಕೊಂಡೊಯ್ಯಲು ಜಾಣ್ತನದಿಂದ ಕೆಲಸ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕಾರ್ಯರೂಪಕ್ಕೆ ಬರಲು ಜಯಚಂದ್ರ ಕಾರಣ, ಇಂತಹ ಪರಿಣಿತರನ್ನು ಕಡೆಗಣಿಸಿಸುವುದರ ಹಿಂದೆ ರಾಜಕೀಯ ಹುನ್ನಾರ, ಷಡ್ಯಂತ್ರ ಮಾಡಲಾಗಿದೆ ಎಂದರು.
ಕುಂಚರೆ?ಟಿಗ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಆದಷ್ಟು ಶೀಘ್ರವಾಗಿ ಸರಿಪಡಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕುಂಚಿಟಿಗರು ಮನಸು ಮಾಡಿದರೆ ತುಮಕೂರು, ಚಿತ್ರದುರ್ಗ ಎರಡು ಲೋಕಸಭಾ ಕ್ಷೇತ್ರದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಸಮಾಜಕ್ಕೆ ದ್ರೋಹ, ಅನ್ಯಾಯ ಮಾಡಲಾಗಿದೆ. ಪಿತೂರಿಗಳಿಂದಲೇ ಸಮುದಾಯವನ್ನು ಮೂಲೆಗುಂಪು ಮಾಡಲಾಗಿದೆ ಅವೈಜ್ಞಾನಿಕವಾಗಿ ಕುಂಚಿಟಿಗರು ಹೆಚ್ಚಿರುವ ಕ್ಷೇತ್ರಗಳನ್ನು ಮೀಸಲು ಕ್ಷೇತ್ರಗಳನ್ನು ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್, ಕಾರ್ಯದರಶಿ ಎಂ.ರಾಜಕುಮಾರ್, ರವಿ, ಶಿವರಾಂ ಇತರರಿದ್ದರು.