ಮೈಸೂರು: ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ನಾಯಕರು ಎಲ್ಲ ಸಮುದಾಯದವರಿಗೂ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ. ಈ ಬಾರಿ ಶೇ.100ರಷ್ಟು ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ಎಲ್ಲ ಸಮುದಾಯಗಳಿಗೂ ಜನಸಂಖ್ಯೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಪುರಭವನ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ಬಚಾವೋ ದೇಶ್ ಬಚಾವೋ ಶೀರ್ಷಿಕೆಯ ಅಡಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ, ಮೀಸಲಾತಿ ವಿಚಾರದಲ್ಲಿ ಬಿಜೆಪಿ ನಾಯಕರು ಗೊಂದಲ ಸೃಷ್ಟಿಸುತ್ತಿದ್ದಾರೆ. ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ಮೇಲೆ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ ಎಂದರು.ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತವನ್ನು ಜನತೆ ಅರ್ಥ ಮಾಡಿಕೊಂಡಿದರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಸಂವಿಧಾನ ತಿದ್ದುಪಡಿ ನ್ಯಾಯಬದ್ಧವಾದ ಮೀಸಲು ಹಂಚಿಕೆ ಮಾಡುತ್ತೇವೆ ಎಂದರು.
ಬಿಜೆಪಿ ನಾಯಕರು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ 28 ವರ್ಷಗಳಿಂದ ಜಾಯಲ್ಲಿದ್ದ ಮೀಸಲಾತಿಯನ್ನು ಕಿತ್ತು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಕೊಡಲಾಗಿದೆ. ಮುಸ್ಲಿಂರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಟ್ಟಿದ್ದು ಸಂವಿಧಾನ ಬಾಹಿರ ಎನ್ನುವ ಬಿಜೆಪಿ ನಾಯಕರು ಇಡಬ್ಲ್ಯೂಸ್ಗೆ ಯಾಕೇ ಸೇರಿಸಿದಿರಿ? ಅವರ ನಡೆಯಲ್ಲಿ ವೈರುಧ್ಯತೆ ಇದೆ. ದ್ವೇಷದ ರಾಜಕಾರಣ ಮಾಡಲು ಮುಸ್ಲಿಂರಿಂದ ಮೀಸಲಾತಿ ಕಸಿದಿದ್ದಾರೆ ಎಂದು ಟೀಕಿಸಿದರು.
ಈಗ ಚುನಾವಣೆ ಬಂದಿತೆಂದು ಮೀಸಲಾತಿ ಹಂಚಿಕೆ ಮಾಡಿದರು. ಇದಾಗಿ ನಾಲ್ಕು ತಿಂಗಳು ಕಳೆದರೂ ಸಂವಿಧಾನ ತಿದ್ದುಪಡಿ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿಲ್ಲ. ಮಾ.೨೩ರಂದು ಮುಖ್ಯಕಾರ್ಯದರ್ಶಿ ಮೂಲಕ ಪ್ರಾಸ್ತಾಪ ಕಳುಹಿಸಿzರೆ ಎಂದು ಟೀಕಿಸಿದರು.
ಸುಪ್ರೀಂ ಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50ಕ್ಕಿಂತ ಹೆಚ್ಚಾಗಬಾರದೆಂದು ತೀರ್ಪು ನೀಡಿದೆ. ತಮಿಳುನಾಡಿನಲ್ಲಿ ಜಯಲಲಿತಾ ಸಂವಿಧಾನಕ್ಕೆ ತಿದ್ದುಪಡಿ ತಂದು ಶೇ. 69 ಮೀಸಲಾತಿ ನೀಡಿದರೆ. ಈಗ ರಾಜ್ಯ ಸರ್ಕಾರ 6 ಮೀಸಲಾತಿ ಹೆಚ್ಚಿಸಿದೆ. ಇದು ಅನುಷ್ಠಾನಕ್ಕೆ ಬರಬೇಕಾದರೆ ಸಂವಿಧಾನ ತಿದ್ದುಪಡಿಯಾಗಬೇಕು. ಆದರೆ, ಸಂವಿಧಾನ ತಿದ್ದುಪಡಿ ಮಾಡುವಂತೆ ಹೇಳಿಲ್ಲ ಎಂದರು.
ಪಂಚಮಸಾಲಿ ಸಮುದಾಯದವರು 2ಎಗೆ ಸೇರಿಸುವಂತೆ ಒತ್ತಾಯಿಸಿದರು. ಒಕ್ಕಲಿಗರು ಶೇ. 12 ಮೀಸಲಾತಿ ಕೊಡುವಂತೆ ಆಗ್ರಹಿಸಿದರು. ಆದರೆ ಮುಸ್ಲಿಂರ ಮೀಸಲಾತಿ ಕಿತ್ತು ಹಂಚಿಕೆ ಮಾಡಿದ್ದಾರೆ. ಒಂದು ಸಮುದಾಯ ಮತ್ತೊಂದು ಸಮುದಾಯ ಕಿತ್ತಾಡಲೆಂದು ಹೀಗೆ ಮಾಡಿದ್ದಾರೆ ಎಂದರು. ಜನಗಳಿಗೆ ಮಕ್ಮಲ ಟೋಪಿ ಹಾಕುವ ಕೆಲಸ ಮಾಡಿದ್ದಾರೆ. ಚುನಾವಣೆ ಹತ್ತಿರ ಬಂದಿದೆಯಂದು ಮೂಗಿಗೆ ತುಪ್ಪ ಸವರಿದ್ದಾರೆ. ಮೀಸಲು ಹಂಚಿಕೆಯಲ್ಲಿ ಗೊಂದಲ ಸೃಷ್ಟಿಸಿ ಜನರನ್ನು ಬಕ್ರಾ ಮಾಡಿzರೆ. ಅವರಿಗೆ ಮಾನ ಮರ್ಯಾದೆ ಇಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಎಐಸಿಸಿ ಕಾರ್ಯದರ್ಶಿ ರೊಜಿ ಜಾನ್, ಜಿ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಜಮೀರ್ ಅಹಮದ್ ಖಾನ್, ಡಾ.ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ನಂಜನಗೂಡು ಕ್ಷೇತ್ರದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕರಾದ ವಾಸು, ಕಳಲೆ ಕೇಶವಮೂರ್ತಿ,ಎ.ಆರ್.ಕೃಷ್ಣಮೂರ್ತಿ, ಎಂ.ಕೆ.ಸೋಮಶೇಖರ್, ವಾಸು, ಮಾಜಿ ಮೇಯರ್ಗಳಾದ ಬಿ.ಕೆ.ಪ್ರಕಾಶದ, ದಕ್ಷಿಣ ಮೂರ್ತಿ, ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮೊದಲಾದವರಿದ್ದರು.