ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿ ತಾಲ್ಲೂಕಿನ ಹೆಬ್ಬೂರಿನವರಾದ ವಕೀಲ ದಿನೇಶ್ಕುಮಾರ್ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಮುಖೇನ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ನಗರದ ಭದ್ರಮ್ಮ ವೃತ್ತದಿಂದ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಎಂ.ಜಿ ರಸ್ತೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ತೆರಳಿದ ದಿನೇಶ್ಕುಮಾರ್ ಅವರು ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿ ಹೋಟೆಲ್ ಶಿವಪ್ಪ ಅವರಿಗೆ ತಮ್ಮ ಉಮೇದುವಾರಿಕೆ ದಾಖಲಿಸಿದರು.
ಆಮ್ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಡಾ. ವಿಶ್ವನಾಥ್, ಜಿಲ್ಲಾಧ್ಯಕ್ಷರಾದ ಪ್ರೇಮಕುಮಾರ್, ಜಿಲ್ಲಾ ಕಾರ್ಯದರ್ಶಿ ಮಧುಸೂದನ್, ಮಹಿಳಾ ಘಟಕ ರೂಕ್ಸನಾ ಬಾನು, ರಾಜೇಶ್ವರಿ, ಪುರುಷೋತ್ತಮ್, ಭೀಮರಾಜು. ಬಿ.ಸಿ. ಗುರುಮೂರ್ತಿ. ಬಿ, ಬೆಳ್ಳಾವಿ ಸ್ವಾಮಿ, ನವೀನ್ ಬಳ್ಳಗೆರೆ, ನಗರ ಅಭ್ಯರ್ಥಿ ಮೊಹಮ್ಮದ್ ಗೌಸ್ ಪೀರ್, ರಘು ರಂಗನಾಥಪುರ ಮತ್ತಿತರರು ದಿನೇಶ್ಕುಮಾರ್ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅಭ್ಯರ್ಥಿ ದಿನೇಶ್ಕುಮಾರ್, ಗ್ರಾಮಾಂತರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಗುರಿ. ದೆಹಲಿ, ಪಂಜಾಬ್ನಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದು, ಅವುಗಳ ಮಾದರಿಯಲ್ಲೇ ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.
ಶಾಶ್ವತವಾಗಿ ರೈತರಿಗೆ ನೀರಾವರಿ, ವಿದ್ಯುತ್, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದಂತಹ ತರಬೇತಿಗಳು, ಸ್ವಯಂ ಉದ್ಯೋಗಕ್ಕೆ ಬೇಕಾದ ಮಾಹಿತಿ ಸೌಲಭ್ಯಗಳನ್ನು ಒದಗಿಸುವುದು, ಕುಂಠಿತಗೊಂಡ ಸೌಲಭ್ಯ ವಂಚಿತ ಜನರನ್ನು ಅಭಿವೃದ್ಧಿ ಮಾಡುವುದೇ ಮೂಲ ಗುರಿಯಾಗಿರಿಸಿಕೊಂಡು ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ವಿಶ್ವನಾಥ್ ಮಾತನಾಡಿ, ಗ್ರಾಮಾಂತರದ ಜನರಿಗೆ ಒಳ್ಳೆಯ ವ್ಯಕ್ತಿ ಸಿಕ್ಕಿದ್ದಾರೆ. ಅಂತಹವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ಜನರ ಮೇಲಿದೆ. ಭ್ರಷ್ಟ ರಾಜಕೀಯ ತೊಲಗಿಸಿ ಸ್ಪಷ್ಟ ರಾಜಕೀಯ ಕೊಡುವುದೇ ಎಎಪಿಯ ಧ್ಯೇಯ ಉದ್ದೇಶ. ಗ್ರಾಮಗಳ ಅಭಿವೃದ್ಧಿ ದೇಶದ ಅಭಿವೃದ್ಧಿ. ಹಾಗಾಗಿ ಗ್ರಾಮಾಂತರದಲ್ಲಿ ಈ ಬಾರಿ ದಿನೇಶ್ ಅವರು ಗೆದ್ದು ಬರಲಿ ಎಂದು ಆಶಿಸಿದರು.