ತುಮಕೂರು: ಮಕ್ಕಳ ಹಕ್ಕುಗಳ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಕಾನೂನು ಅರಿವಿನ ಅಗತ್ಯವಿದೆ. ಹದಿಹರೆಯದ ಮಕ್ಕಳ ವಿಕಾಸಕ್ಕಾಗಿ ಉತ್ತಮ ಪರಿಸರ ನಿರ್ಮಾಣ ಮಾಡಲು ನಾವೆಲ್ಲಾ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಮಿಷನ್ ವಾತ್ಸಲ್ಯ ಯೋಜನೆ ಮತ್ತು ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಜನವರಿ 2023 ರಿಂದ ಮಾರ್ಚ-2023 ರವರಗೆ ಒಟ್ಟು 12 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. 3 ಪ್ರಕರಣಗಳಲ್ಲಿ ಬಾಲ್ಯ ವಿವಾಹಗಳು ಜರುಗಿದ್ದು, ಸಂಬಂಧಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದಾಗ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದು ಬಾಲ್ಯ ವಿವಾಹ ತಡೆಗಟ್ಟಬೇಕು. ಮಾಹಿತಿ ನೀಡುವ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಬೇಕು ಎಂದು ತಿಳಿಸಿದರು.
ಬಾಲ ಮಂದಿರಗಳಲ್ಲಿ ಸ್ವಚ್ಚತೆಗೆ ಗಮನ: ಹದಿಹರೆಯದ ಮಕ್ಕಳು ಉತ್ತಮ ಜ್ಞಾನಾರ್ಜನೆ ಹೊಂದುವುದು ಅವಶ್ಯ, ಬಾಲಮಂದಿರಗಳಲ್ಲಿ ಶುದ್ದ ಕುಡಿಯುವ ನೀರು ನಿರ್ವಹಣೆ, ಪುಸ್ತಕಗಳು, ಕೌಂಪೌಂಡ್, ಆಟದ ಮೈದಾನ, ಉದ್ಯಾನವನ, ಕ್ರೀಡಾ ಉಪಕರಣಗಳ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಾಲ್ಯ ವಿವಾಹ ನಿಷೇಧ ಅರಿವು: ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗರಿ, ಪಾವಗಡ ತಾಲ್ಲೂಕುಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಯುವಮೇಳ’ ಹಮ್ಮಿಕೊಳ್ಳಲಾಗಿದೆ, ಪ್ರಕರಣಗಳು ಹೆಚ್ಚಾಗಿ ಬಾಲ್ಯ ವಿವಾಹ ತಡೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ನಿ?ಧ, ಮತ್ತಿತರ ಕಾಯ್ದೆ ಹಾಗೂ ಮಹಿಳಾ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಸಮುದಾಯಗಳಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ಮಾತನಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣಾ ಕುರಿತಾಗಿ ಹಾಗೂ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದರೆ ಟೋಲ್ ಫ್ರೀ ನಂ. 112 ಅಥವಾ 109೮ಗೆ ಸಂಪರ್ಕಿಸುವಂತೆ ಅವರು ತಿಳಿಸಿದರು.
ಮಿಷನ್ ವಾತ್ಸಲ್ಯ ಯೋಜನೆ: ಮಿಷನ್ ವಾತ್ಸಲ್ಯ ಯೋಜನೆಯು ಮಕ್ಕಳ ಹಕ್ಕುಗಳು, ವಕಾಲತ್ತು ಮತ್ತು ಜಾಗೃತಿಗೆ ಒತ್ತು ನೀಡುವುದರ ಜೊತೆಗೆ ಬಾಲಾಪರಾಧಿ ನ್ಯಾಯ ರಕ್ಷಣೆ ವ್ಯವಸ್ಥೆಯನ್ನು ಬಲಪಡಿಸುವುದರೊಂದಿಗೆ ಯಾವುದೇ ಮಗುವನ್ನು ಹಿಂದೆ ಬಿಡಬೇಡಿ’ ಎಂಬ ಧ್ಯೇಯವಾಕ್ಯದೊಂದಿಗೆ. ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, ೨೦೧೫ ನಿಬಂಧನೆಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, ೨೦೧೨ ಅನುಷ್ಠಾನಕ್ಕೆ ಮೂಲಭೂತ ಚೌಕಟ್ಟನ್ನು ರೂಪಿಸುತ್ತವೆ. ಇದರಲ್ಲಿ ಆಸಕ್ತ ಪ್ರಾಯೋಜಕರು (ವ್ಯಕ್ತಿಗಳು, ಸಂಸ್ಥೆಗಳು,ಕಂಪನಿಗಳು, ಬ್ಯಾಂಕ್ಗಳು,ಕೈಗಾರಿಕಾ ಘಟಕಗಳು,ಟ್ರಸ್ಟ್ಗಳು ಇತ್ಯಾದಿ) ಸಂದರ್ಭಗಳಲ್ಲಿ ಮಕ್ಕಳಿಗೆ ಸಹಾಯವನ್ನು ನೀಡಬಹುದು. ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ವ್ಯಕ್ತಿಗಳು ಅಥವಾ ಸಾರ್ವಜನಿಕ,ಖಾಸಗಿ ವಲಯದ ಸಂಸ್ಥೆಗಳು ಮಗುವನ್ನು ಅಥವಾ ಮಕ್ಕಳ ಗುಂಪನ್ನು ಅಥವಾ ಸಂಸ್ಥೆಯನ್ನು ಪ್ರಾಯೋಜಿಸಲು ಪ್ರೋತ್ಸಾಹಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅಂತಹ ವ್ಯವಸ್ಥೆಗಳು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ಮತ್ತು ಅದರ ನಿಯಮಗಳ ಪ್ರಕಾರ ನಿಬಂಧನೆಗಳಿಗೆ ಒಳಪಟ್ಟಿರುತ್ತವೆ ಎಂದು ಮಾಹಿತಿ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ನೂರುನ್ನೀಸ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ, ವಿವಿಧ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸ್ವಯಂ ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಇತರರು ಹಾಜರಿದ್ದರು.