ತುಮಕೂರು: ಐತಿಹಾಸಿಕ ಪ್ರವಾಸಿ ತಾಣವಾದ ದೇವರಾಯನದುರ್ಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿ ಊರ್ಡಿಗೆರೆ ಹೋಬಳಿ ಸರ್ವತ್ತೋಮುಖ ಅಭಿವೃದ್ಧಿಪಡಿಸುವುದೇ ನನ್ನ ಮುಂದಿನ ಗುರಿಯಾಗಿದೆ ಎಂದು ತುಮಕೂರು ಗ್ರಾಮಾಂತರದ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ಗೌಡ ತಿಳಿಸಿದರು.
ತುಮಕೂರು ಗ್ರಾಮಾಂತರದ ದೇವರಾಯನ ದುರ್ಗದ ಶ್ರೀ ಯೋಗನರಸಿಂಹ ಸ್ವಾಮಿ ಮತ್ತು ಬೋಗ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಚುನಾವಣಾ ಪ್ರಚಾರ ಆರಂಭಿಸಿ ಮಾತನಾಡಿದರು, ಊರ್ಡಿಗೆರೆ ಹೋಬಳಿಗೆ ಪದವಿ ಕಾಲೇಜು ಹಾಗೂ ದೇವರಾಯನದುರ್ಗಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಊರ್ಡಿಗೆರೆಗೆ ಪದವಿ ಕಾಲೇಜಿನ ಅಗತ್ಯವಿದೆ. ಇಲ್ಲಿಗೆ ವಸಂತನರಾಸಪುರ, ದಾಬಸಪೇಟೆ ಕೈಗಾರಿಕಾ ಪ್ರದೇಶ ಎರಡೂ ಹತ್ತಿರದಲ್ಲಿವೆ. ಇವುಗಳ ಪ್ರಯೋಜನ ಪಡೆಯಬೇಕಾದರೆ ಇಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣದ ಅಗತ್ಯವಿದೆ. ಹೆಣ್ಣು ಮಕ್ಕಳಿಗೆ ಮನೆ ಬಾಗಿಲಲ್ಲೇ ಶಿಕ್ಷಣ ಸಿಗುವಂತಾಗಬೇಕಾಗಿದೆ. ನಾನು ಶಾಸಕನಾಗಿ ಆಯ್ಕೆಯಾದರೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುತ್ತೇನೆ. ಹಳ್ಳಿ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಒದಗಿಸುತ್ತೇನೆ ಎಂದು ಪೋಷಕರಿಗೆ ಭರವಸೆ ನೀಡಿದರು.