ತುಮಕೂರು: ರಾಜ್ಯ ಸರ್ಕಾರ ತಂದಿರುವುದು ಮತಾಂತರ ನಿಷೇಧ ಕಾಯ್ದೆ ಅಲ್ಲ. ಆಸೆ ಆಮಿಷಗಳನ್ನು ತೋರಿಸಿ ಬಲವಂತವಾಗಿ ಮತಾಂತರ ಮಾಡುವುದನ್ನು ತಡೆಯುವ ಕಾಯ್ದೆ ಅಷ್ಟೇ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಈಗಿರುವ ಕಾನೂನಿನಲ್ಲಿ ಬಲವಂತದ ಹಾಗೂ ಆಸೆ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದು ತಪ್ಪು ಎಂದು ಹೇಳಲಾಗಿದೆ. ಆದರೆ ಬಲವಂತ ಮತಾಂತರವಾದ ಮಾಡಿದವರಿಗೆ ಶಿಕ್ಷೆ ಪ್ರಮಾಣವನ್ನು ನಿಗದಿಪಡಿಸಿರಲಿಲ್ಲ. ರಾಜ್ಯ ಸರ್ಕಾರ ಈಗ ತಂದಿರುವ ಕಾಯ್ದೆಯಲ್ಲಿ ಶಿಕ್ಷೆಯ ಪ್ರಮಾಣ ಹಾಗೂ ದಂಡದ ಪ್ರಮಾಣವನ್ನು ನಿಗದಿಪಡಿಸಲಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ವ್ಯಕ್ತಿಗಳು ಮತಾಂತರವಾದರೆ ಮತಾಂತರವಾದ ದಿನದಿಂದ ಅವರು ಈ ಹಿಂದೆ ಪಡೆಯುತ್ತಿದ್ದ ಪಜಾತಿ ಪವರ್ಗದ ಸೌಲಭ್ಯ ಗಳನ್ನು ಸ್ಥಗಿತಗೊಳಿಸಲು ಹೊಸಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಹಿಂದೆ ಸಿದ್ಧಗಂಗಾ ಶ್ರೀಗಳೂ ಈ ಕಾಯ್ದೆಯ ಅಗತ್ಯದ ಬಗ್ಗೆ ಹೇಳಿದ್ದರು. ಅದೇ ಆರ್. ಎಸ್. ಎಸ್. ಹಾಗೂ ಇತರೆ ಸಂಘಟನೆಗಳೂ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆಗ ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಕಾನೂನು ಇಲಾಖೆ ಸಿದ್ಧಪಡಿಸಿದ್ದ ಕರಡು ಪ್ರತಿಗೆ ಸಹಿಹಾಕಿದ್ದರು. ಆದರೆ ಈಗ ಇಲ್ಲ ಎನ್ನುವುದು ಎಷ್ಟು ಸರಿ ಎಂದರು. ಮುಂದಿನ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿಯೂ ಈ ಕಾಯ್ದೆಗೆ ಒಪ್ಪಿಗೆಪಡೆಯಲಾಗುವುದು ಎಂದರು.