ತುಮಕೂರು: ಇಂದು ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ತಂತಿ ತಗುಲಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಕರೀಕೆರೆ ಗ್ರಾಮದಲ್ಲಿ ಸಂಭವಿಸಿದೆ.
ದೇಶವೇ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಆದರೆ, ಜಿಲ್ಲೆಯ ಕರೀಕೆರೆ ಗ್ರಾಮದಲ್ಲಿ ನಡೆಯಬಾರದ ದುರ್ಘಟನೆ ನಡೆದುಹೋಗಿದೆ. ಧ್ವಜಾರೋಹಣಕ್ಕೆ ಕಂಬ ನಿಲ್ಲಿಸುವ ವೇಳೆ ಅವಘಡ ಸಂಭವಿಸಿದ್ದು, 16 ವರ್ಷದ ಬಾಲಕ ಚಂದನ್ ಕೊನೆಯುಸಿರೆಳೆದಿದ್ದಾನೆ.
ಮೂವರು ಸರ್ಕಾರಿ ಶಾಲೆಯಲ್ಲಿ ಧ್ವಜಸ್ತಂಭ ನಿಲ್ಲಿಸಲು ಹೋದಾಗ ಮೂವರಿಗೂ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಚಂದನ್ (16) ಸಾವನ್ನಪ್ಪಿದ್ದು, ಶಶಾಂಕ್ (16), ಪವನ್ (22) ಗೆ ಗಾಯವಾಗಿದೆ. ಸದ್ಯ ಇವರು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂವರು ಕರಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು. ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಶಾಲೆಗೆ ಧ್ವಜಸ್ತಂಭ ನಿಲ್ಲಿಸಲು ತೆರಳಿದ್ದರು. ಶಿಕ್ಷಕರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಅಂತ ಪೋಷಕರು ಆರೋಪಿಸಿದ್ದಾರೆ.