ತುಮಕೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಏಪ್ರಿಲ್ 01) ಸಿದ್ಧಲಿಂಗಾ ಮಠಕ್ಕೆ ಭೇಟಿ ನೀಡಲಿದ್ದು, ಸಿದ್ಧಲಿಂಗಾ ಮಠವು ಅಮಿತ್ ಶಾ ಸ್ವಾಗತಕ್ಕೆ ಸಜ್ಜಾಗಿದೆ. ನಡೆದಾಡುವ ದೇವರ ಜನ್ಮ ದಿನೋತ್ಸವದ ಹಿನ್ನೆಲೆ ಮಠದಲ್ಲಿ ಹಬ್ಬದ ವಾತಾವರಣ ನೆಲೆಯಾಗಿದೆ.
ನಡೆದಾಡುವ ದೇವರ 115 ನೇ ಜನ್ಮ ದಿನೋತ್ಸವದ ಹಿನ್ನೆಲೆ ತುಮಕೂರಿನಲ್ಲಿ ಹಬ್ಬದ ವಾತಾವರಣ ನೆಲೆನಿಂತಿದೆ. ಭಕ್ತಾದಿಗಳು ಶ್ರೀಗಳ ಹುಟ್ಟುಹಬ್ಬದ ತಯಾರಿ ನಡೆಸಿದ್ದಾರೆ. ಜೊತೆಗೆ ಅಮಿತ್ ಶಾ ಸ್ವಾಗತಕ್ಕೆ ಸಿದ್ಧತೆಯನ್ನು ಮಾಡಿದ್ದಾರೆ. ಶ್ರೀಗಳಿಗೆ ಇಂದು ನಾಲ್ಕು ಲಕ್ಷ ಜನರು ನುಡಿನಮನ ಸಲ್ಲಿಸಲಿದ್ದಾರೆ.
ಇಂದು ಮುಂಜಾನೆಯೇ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿದೆ. ಮುಂಜಾನೆಯೇ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಪುಷ್ಪ ವೃಷ್ಟಿ ಮತ್ತು ಅರ್ಚಕರಿಂದ ಮಂತ್ರ ಪಠಣ ಕಾರ್ಯಗಳು ನಡೆದಿದೆ.
ಇನ್ನು ಸಾವಿರಾರು ಮಂದಿಗೆ ಭೋಜನದ ವ್ಯವಸ್ಥೆಯನ್ನು ಕೂಡಾ ಮಠದಲ್ಲಿ ಮಾಡಲಾಗಿದೆ. ಇದಕ್ಕಾಗಿ ಮಠದಲ್ಲಿರುವ ವಿದ್ಯಾರ್ಥಿಗಳು ಕೂಡಾ ಕೈಜೋಡಿಸಿದ್ದಾರೆ.
ಸಿದ್ದಗಂಗಾ ಮಠದ ಆವರಣದಲ್ಲಿರುವ ಹಳೇ ಊಟದ ಮನೆ, ಹೊಸ ಊಟದ ಮನೆ, ಕೆಂಪಹೊನ್ನಯ್ಯ ಅತಿಥಿ ಗೃಹ, ಪ್ರಾರ್ಥನಾ ಮಂದಿರ, ಸಿದ್ದಾರ್ಥ ಅತಿಥಿ ಗೃಹ, ಸೌದೆ ಕೊಪ್ಪಲು, ಉದ್ದಾನೇಶ್ವರ ಊಟದ ಮನೆ, ವಸ್ತು ಪ್ರದರ್ಶನದ ಊಟದ ಮನೆಗಳಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟದ ವ್ಯವಸ್ಥೆಯನ್ನು ಭಕ್ತರಿಗೆ ಏರ್ಪಡಿಸಲಾಗಿದೆ.