ತುಮಕೂರು : ತನ್ನ ವಿಶಿಷ್ಟ ಪ್ರತಿಭೆಗಾಗಿ ತುಮಕೂರಿನ 2 ವರ್ಷ 8 ತಿಂಗಳ ಮಗುವೊಂದು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನಗಳಿಸಿದೆ. ಡಾ. ಎಸ್. ನಾಗರಾಜ-ಮಧುಶಾಲಿನಿ ದಂಪತಿಗಳ ಮಗಳು ಲಿರೀಷಾ ನಾಗರಾಜ್ ಎಂ.ಎಸ್. ಈ ಸಾಧನೆ ಮಾಡಿದ ಪುಟಾಣಿ.
ಎಳೆಯ ವಯಸ್ಸಿನಲ್ಲೇ ಅನೇಕ ಸಾಮಾನ್ಯ ಜ್ಞಾನ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡಿರುವ ಲಿರೀಷಾ ಭಾರತದ ಪ್ರಧಾನಿಗಳು, ರಾಷ್ಟ್ರಪತಿಗಳು, ಜಗತ್ತಿನ ಅದ್ಭುತಗಳು, ಮಹಾಕವಿಗಳು, ಜ್ಞಾನಪೀಠ ಪುರಸ್ಕೃತರು, ನದಿಗಳು, ವೇದಗಳು,ರಾಷ್ಟ್ರೀಯ ಚಿಹ್ನೆಗಳು, ವಿವಿಧ ಪ್ರಾಣಿಪಕ್ಷಿಗಳು, ಪ್ರಸಿದ್ಧ ವ್ಯಕ್ತಿಗಳು, ಶ್ಲೋಕಗಳು ಮುಂತಾದವನ್ನು ಕೆಲವೇ ಕ್ಷಣಗಳಲ್ಲಿ ಹೇಳ ಬಲ್ಲವಳಾಗಿದ್ದಾಳೆ.
ಮನೆಯಲ್ಲೇ ಇರುವ ಅಜ್ಜಿ-ತಾತನ ಗರಡಿಯಲ್ಲಿ ಪಳಗಿರುವ, ಅರಳು ಹುರಿದಂತೆ ಮಾತಾಡುವ ಲಿರೀಷಾ ತನ್ನ ಪ್ರತಿಭೆಗಾಗಿ ಈಗಾಗಲೇ ಅನೇಕ ಪುರಸ್ಕಾರಗಳನ್ನು ಪಡೆದಿದ್ದಾಳೆ. ಈಕೆಯ ತಂದೆ ಡಾ. ಎಸ್. ನಾಗರಾಜ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾಗಿದ್ದಾರೆ.