ಬೆಂಗಳೂರು: ಹೆಣ್ಣುಮಕ್ಕಳಿಗೆ 2,000 ರೂ. ಕೊಡುತ್ತೇವೆ. ಅವರು ಆ ದುಡ್ಡಲ್ಲಿ ಮನೆ ನಡೆಸುತ್ತಾರೆ. ನೀವಾಗಿದ್ದರೆ ಎಣ್ಣೆ ಅಂಗಡಿಗೆ ಹೋಗ್ತಿದ್ರಿ, ಅದಕ್ಕೆ ಹೆಣ್ಣುಮಕ್ಕಳಿಗೆ ಹಣ ಕೊಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಗ್ಯಾರಂಟಿ ಜಾರಿ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಗಂಡಸರನ್ನ ನಂಬಲ್ಲ, ಹೆಣ್ಣುಮಕ್ಕಳನ್ನು ನಂಬುತ್ತೇವೆ. ಅದಕ್ಕೆ ಅವರಿಗೆ ನಾವು ಐದು ಗ್ಯಾರಂಟಿಗಳನ್ನು ತಂದಿದ್ದೇವೆ. ಜನರಿಗಾಗಿ ಯೋಜನೆಗಳನ್ನು ಕೊಟ್ಟಿದ್ದೇವೆ. ತಮಿಳುನಾಡು ನೋಡಿ ಶಕ್ತಿ ಯೋಜನೆ ತಂದೆವು. 4,000 ಕೋಟಿ ಬಾರಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಯೋಜನೆ ಕೊಟ್ಟಿದ್ದೇವೆ ಎಂದರು.
ಶಿವಮೊಗ್ಗ ಕಾರ್ಯಕ್ರಮ ನೋಡಿದ್ರೆ ಸೋಲು ಖಚಿತ. ಯಡಿಯೂರಪ್ಪ ಪುತ್ರ ರಾಘವೇಂದ್ರ ಗೆಲ್ಲಲ್ಲ. ಈಗ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ತಲುಪದಿದ್ದರೆ ತಲುಪಿಸುವ ಕೆಲಸ ಮಾಡಬೇಕು. ರಾಜ್ಯ ಮಟ್ಟದಲ್ಲಿ ಐವರನ್ನ ನೇಮಿಸಿದ್ದೇವೆ. 50,000 ವೇತನವನ್ನೂ ಕೊಡುತ್ತೇವೆ ಎಂದರು.
ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆಯಾಗಲಿವೆ. ತಾಲೂಕು ಮಟ್ಟದಲ್ಲಿ ಸಮಿತಿ ರಚನೆಯಾಗಿದೆ. 15,000 ಸದಸ್ಯರನ್ನು ನೇಮಿಸಿದ್ದೇವೆ. ಕಾರ್ಡ್ ಇಟ್ಟುಕೊಂಡು ವಿಧಾನಸೌಧಕ್ಕೆ ಬರಬಹುದು. ಕಾರ್ಡ್ ಮಿಸ್ಯೂಸ್ ಆಗಬಾರದು. ಕೆಟ್ಟ ಹೆಸರು ತಂದರೆ ವಜಾ ಮಾಡುತ್ತೇವೆ. ನೀವು ಜನರ ಸೇವೆ ಮಾಡಬೇಕು. ಯಾವ ರಾಜ್ಯದಲ್ಲೂ ಕಾರ್ಯಕರ್ತರಿಗೆ ಶಕ್ತಿ ತುಂಬಿಲ್ಲ. ನಾವು ಕಾರ್ಯಕರ್ತರಿಗೆ ಶಕ್ತಿ ತುಂಬಿದ್ದೇವೆ ಎಂದು ಹೇಳಿದರು.
ನಮ್ಮ ಗ್ಯಾರಂಟಿ ಬಗ್ಗೆ ಅವಹೇಳನ ಮಾಡುತ್ತಿದ್ದರು. ಮಧ್ಯಪ್ರದೇಶದಲ್ಲಿ ಕಾಪಿ ಹೊಡೆದರು. ಈಗ ಮೋದಿ ಗ್ಯಾರಂಟಿ ಅಂತ ಮಾಡಿಕೊಂಡಿದ್ದಾರೆ. ವೋಟಿಗೆ 200, 300 ಕೊಡ್ತಾರಂತೆ ಅನ್ನೋದು ಬೇಡ. ನಾವು 5,000 ಕೊಡುತ್ತಿದ್ದೇವೆ. ನಮಗೆ ಅಷ್ಟೇ ಸಾಕು. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ನಮ್ಮ ದೇವಸ್ಥಾನ ತುಂಬೋಯ್ತು, ಅಂಗಡಿ ಮುಂಗಟ್ಟು ತುಂಬೋಯ್ತು ಎಂದು ಸಿಎಂಗೆ ಪತ್ರ ಬರೆದಿದ್ದಾರೆ. ಅದಕ್ಕೆ ನಮ್ಮ ಗ್ಯಾರಂಟಿಗಳ ಮಹತ್ವ ಇದೆ ಎಂದರು.