ಬೆಂಗಳೂರು: ರಾಜ್ಯಾಧ್ಯಕ್ಷರು ನಮ್ಮ ಮನೆಗೆ ಬರುವುದು ಬೇಡ ಎಂದು ಕಡ್ಡಿ ಮುರಿದಂತೆ ಶಾಸಕ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಮಾಹಿತಿ ನೀಡಿದ್ದು, ಬಿಜೆಪಿ ಪಕ್ಷದಲ್ಲಿ ನಾನು ಹೊರಗುಳಿಯುವಂತೆ ಮಾಡುವಲ್ಲಿ ವಿಜಯೇಂದ್ರ ಅವರ ಪಾತ್ರ ಏನೆಂಬುದು ನನಗೆ ಗೊತ್ತಿದೆ. ಕಾಟಾಚಾರಕ್ಕೆ ನಾಟಕೀಯವಾಗಿ ಹೂಗುಚ್ಚ ಕೊಡಲು ಬರುವುದು ಬೇಡ. ಇದನ್ನು ನೋಡಿದ ಮಾಧ್ಯಮಗಳು ವಿಜಯೇಂದ್ರ ಅವರಿಗೆ ತಲೆಬಾಗಿದ ಯತ್ನಾಳ್ ಎಂದು ಸುದ್ದಿ ಆಗುವುದು ಬೇಡ ಎಂದು ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ನನಗೆ ಮಂತ್ರಿ ಸ್ಥಾನ ನೀಡದೇ ನನ್ನ ತುಳಿಯುವಲ್ಲಿ ನಡೆದ ನಿಮ್ಮ ಪ್ರಯತ್ನ ಬಗ್ಗೆ ಗೊತ್ತಿದೆ. ವಿಜಯಪುರ ಅಭಿವೃದ್ಧಿಗೆ ನೀಡಿದ್ದ 125 ಕೋಟಿ ಹಣ ವಾಪಸ್ ಪಡೆದಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ನೀಡಿದ ಕೆಲಸ ಕಾರ್ಯಗಳ ಪತ್ರಗಳು ವಿಜಯೇಂದ್ರ ಅವರು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು ಎಂದು ಮತ್ತೆ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.