ಬೆಂಗಳೂರು: ಸ್ವೀಪ್ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ ಅಡಿಯಲ್ಲಿ ಎಲ್ಲಾ ಮತದಾರರಲ್ಲಿ ಮತದಾನದ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲು ಅದರಲ್ಲೂ ಮುಖ್ಯವಾಗಿ ಮಹಿಳಾ ಮತದಾರರು, ತೃತೀಯ ಲಿಂಗಿಗಳು, ಯುವ ಮತದಾರರು, ವಿಶೇಷ ಚೇತನರು, ಆದಿವಾಸಿ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮುಖಾಂತರ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಂತೆ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಿದೆ.
ಆದಿವಾಸಿಗಳ ಮತಗಟ್ಟೆಗಳನ್ನು ಕಾಡಿನ ಅಂಚಿನಲ್ಲಿರುವ ಅಥವಾ ಕಾಡಿನಲ್ಲಿ ಜೀವಿಸುವ ಆದಿವಾಸಿ ಜನರಿಗಾಗಿ ಪರಿಶಿಷ್ಟ ವರ್ಗಗಳ ಇಲಾಖೆ ವತಿಯಿಂದ ಮತಗಟ್ಟೆಗಳನ್ನು ಸಾಂಪ್ರದಾಯಿಕ ಬುಡಕಟ್ಟು ಜನರ ಸಾಂಸ್ಕೃತಿಕ ಹಿನ್ನೆಲೆ ಬಿಂಬಿಸುವ ರೀತಿಯಲ್ಲಿ ಅಲಂಕರಿಸುವ ಮೂಲಕ ಆದಿವಾಸಿ ಮತದಾರರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆಕರ್ಷಿಸುವಂತೆ ಮಾಡಲು ಈ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.
2024 ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಆದಿವಾಸಿ ಸಾಂಪ್ರದಾಯಿಕ ಶೈಲಿಯಲ್ಲಿ ಮತಗಟ್ಟೆಗಳನ್ನು ಸಿದ್ಧಪಡಿಸುವ ಕುರಿತು ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆದಿವಾಸಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಹಾಡಿ, ಪೇಡು, ಹಳ್ಳಿಗಳಲ್ಲಿ ಮತದಾನದ ಬಗ್ಗೆ ಆಸಕ್ತಿ ಹೆಚ್ಚಿಸಲು ಮತ್ತು ನಿರ್ಭೀತಿಯಿಂದ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಲು ಆಯ್ದ ಜಿಲ್ಲೆಗಳ ಮತಗಟ್ಟೆ ಕೇಂದ್ರಗಳಲ್ಲಿ ಪರಿಶಿಷ್ಟ ಪಂಗಡದವರ ಸಾಂಪ್ರದಾಯಿಕ ಶೈಲಿಯಲ್ಲಿ ಮತಗಟ್ಟೆಗಳನ್ನು ಇಲಾಖಾ ವತಿಯಿಂದ ನಿರ್ಮಿಸಲಾಗುತ್ತಿದೆ.
ಈ ಅಂಶಗಳ ಹಿನ್ನಲೆಯಲ್ಲಿ ಚಾಮರಾಜನಗರ 9, ಮೈಸೂರು 9. ದಕ್ಷಿಣ ಕನ್ನಡ 5, ಶಿವಮೊಗ್ಗ 3, ಉಡುಪಿ 1, ಹಾಸನ 1. ಉತ್ತರ ಕನ್ನಡ 5, ಕೊಡಗು 5 ಮತ್ತು ಚಿಕ್ಕಮಗಳೂರು 2 ಒಟ್ಟಾರೆ 40 ಸಾಂಪ್ರದಾಯಿಕ, ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.
ಆ ಮೂಲಕ ಮುಖ್ಯ ಚುನಾವಣಾಧಿಕಾರಿಯವರ ಕಛೇರಿಯು ಎಲ್ಲಾ ವರ್ಗದ ಮತದಾರರನ್ನು ಒಳಗೊಂಡಂತೆ ಮತದಾನ ಪ್ರಕ್ರಿಯೆಯಲ್ಲಿ ಸುಗಮವಾಗಿ ಭಾಗವಹಿಸುವಂತೆ ಮಾಡಲು ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು.
ಪ್ರತಿ ಮತವೂ ಅಮೂಲ್ಯವಾದುದ್ದು ಎಂಬ ಧ್ಯೇಯವನ್ನು ಹೊಂದಿದೆ. ಈ ಚುನಾವಣೆಗಳನ್ನು ಒಳಗೊಳ್ಳುವ, ಸುಗಮ, ನೈತಿಕ, ಭಾಗವಹಿಸುವಿಕೆಯ ಮಾಹಿತಿಯುಕ್ತ ಚುನಾವಣೆ ಎಂಬುದಾಗಿ ರಾಜ್ಯದಾದ್ಯಂತ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲಾ ಮತದಾರರು ಭಾಗವಹಿಸಲು ಶ್ರಮಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.