ಬೆಂಗಳೂರು: ಸ್ಯಾಂಡಲ್ವುಡ್ ನಟನ ವಿರುದ್ಧ ವಂಚನೆ ದೂರು ದಾಖಲಾಗಿದೆ. ನಟನ ವಿರುದ್ಧ ಯುವತಿ ಆರೋಪಗಳ ಸುರಿಮಳೆಗೈದಿದ್ದಾರೆ. ಯುವತಿ ನೀಡಿದ ದೂರಿನ ಆಧರಿಸಿ ನಟ ಸಂತೋಷ್ ಎಂಬಾತನ ವಿರುದ್ಧ ಜ್ಞಾನಭಾರತಿ ರಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
5 ವರ್ಷಗಳ ಹಿಂದೆ ಯುವತಿಗೆ ನಟ ಸಂತೋಷ್ ಪರಿಚಯವಾಗಿದೆ. ತಾನು ಸಿನಿಮಾ ನಟ ಎಂದು ತನ್ನನ್ನು ಆತ ಪರಿಚಯಿಕೊಂಡಿದ್ದ. ಬಳಿಕ ನಿನಗೂ ಸಿನಿಮಾದಲ್ಲಿ ನಟಿಸಲು ಚಾನ್ಸ್ ಕೊಡಿಸುವೆ ಎಂದು ಯುವತಿ ಜೊತೆ ಕ್ಲೋಸ್ ಆಗಿದ್ದಾನೆ. ಬಳಿಕ ಪ್ರೀತಿಯ ನಾಟಕ ಶುರು ಮಾಡಿದ್ದ ಎಂದು ಯುವತಿ ಆರೋಪಿಸಿದ್ದಾರೆ.
ಸಿನಿಮಾದಲ್ಲಿ ನಿನ್ನ ನಾಯಕ ನಟಿಯನ್ನಾಗಿ ಮಾಡ್ತೀನಿ ಎಂದು ಯುವತಿಗೆ ಹೇಳಿದ್ದಾನೆ. ಆತನ ಮಾತುಗಳನ್ನು ಆಕೆ ಕೂಡ ನಂಬಿದ್ದಳು. ಪ್ರೀತಿ, ಪ್ರೇಮ ಅಂತ ಹೇಳಿ ಆತ ಯುವತಿಯನ್ನು ಮೈಸೂರು, ಗೋವಾಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.
ಯುವತಿ ಜೊತೆ ಊರು ಸುತ್ತಿದ ಸಂತೋಷ್ ಅಷ್ಟಕ್ಕೇ ಆಕೆಯೊಂದಿಗಿನ ಖಾಸಗಿ ಕ್ಷಣಗಳನ್ನು ಫೋನ್ನಲ್ಲಿ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾನೆ. ಯುವತಿಯು ತನಗೆ ವಂಚನೆ ಆಗ್ತಿದೆ ಎನ್ನುವ ವಿಚಾರ ತಿಳಿದ ಬಳಿಕ ನಟ ಸಂತೋಷ್ ನನ್ನು ಪ್ರಶ್ನೆ ಮಾಡಿದ್ದಾರೆ. ವಿಷಯ ಯಾರಿಗಾದ್ರೂ ಹೇಳಿದ್ರೆ ನಿನ್ನ ಫೋಟೋ, ವಿಡಿಯೋವನ್ನು ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.
ನಟ ಸಂತೋಷ್ ಯುವತಿ ಮನೆ ಬಳಿ ಹೋಗಿ ನಾನು ಕರೆದಾಗ ನೀನು ಬರಬೇಕು, ಇಲ್ಲವಾದ್ರೆ ಖಾಸಗಿ ಫೋಟೊ, ವಿಡಿಯೋಗಳನ್ನ ವೈರಲ್ ಮಾಡುತ್ತೇನೆ, ನಿನ್ನ ತಂದೆ ತಾಯಿಗೂ ತೋರಿಸುತ್ತೇನೆ ಎಂದು ಬೆದರಿಸಿದ್ದಾನೆ. ಅಷ್ಟೇ ಅಲ್ಲದೇ ನನ್ನ ಬಳಿಯಿದ್ದ ಹಣ, ಒಡವೆಗಳನ್ನೆಲ್ಲಾ ಕಿತ್ತುಕೊಂಡು ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಯುವತಿ ದೂರಿದ್ದಾಳೆ.
ನೊಂದ ಯುವತಿ 6 ತಿಂಗಳ ಹಿಂದೆಯೂ ಆತನ ವಿರುದ್ಧ ದೂರು ನೀಡಿದ್ದಳು. ಆದರೆ ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಅತ್ತಿಬೆಲೆ ಠಾಣೆಗೆ ಪ್ರಕರಣ ವರ್ಗಾವಣೆ ಆಗಿತ್ತು. ಮತ್ತೆ ಹಲ್ಲೆ ಮಾಡಿರುವ ಕಾರಣ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.